ಹೊಳಲ್ಕೆರೆ: ತಾಲ್ಲೂಕಿನ ಗಿಲಿಕೇನಹಳ್ಳಿಯಲ್ಲಿ ಭಾನುವಾರ ಹೊಲದಲ್ಲಿ ಮೆಕ್ಕೆಜೋಳಕ್ಕೆ ಗೊಬ್ಬರ ಹಾಕುತ್ತಿರುವಾಗ ತನುಜಾ ಎಂಬ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ಹೊಲದಲ್ಲಿ ಮೆಕ್ಕೆಜೋಳಕ್ಕೆ ಗೊಬ್ಬರ ಹಾಕುತ್ತಿರುವಾಗ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದೆ.
ತನುಜಾ ತನ್ನ ಪತಿ ತಿಪ್ಪೇಸ್ವಾಮಿ ಹಾಗೂ 10 ಜನರು ಮೆಕ್ಕೆಜೋಳಕ್ಕೆ ಗೊಬ್ಬರ ಹಾಕಲು ಹೊಲಕ್ಕೆ ತೆರಳಿದ್ದರು. ಆಗ ಒಂದು ಚಿರತೆ ಹಾಗೂ ಎರಡು ಮರಿಗಳು ದಾಳಿ ನಡೆಸಿವೆ. ಚಿರತೆ ತನುಜಾ ಅವರ ತಲೆ, ಕೈ, ಮುಖಕ್ಕೆ ಪರಚಿದೆ. ಮುಖದ ಮೇಲೆ ತೀವ್ರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದವರು ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆಕ್ರೋಶ: ತಾಲ್ಲೂಕಿನ ಗಿಲಿಕೇನಹಳ್ಳಿ ಸುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ ಎಂದು ಸ್ಥಳೀಯರು ವಲಯ ಅರಣ್ಯಾಧಿಕಾರಿ ಸತೀಶ್ ಅವರಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿರತೆಗಳು ಜನ, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಈಗ ಮೆಕ್ಕೆಜೋಳ ಬೆಳೆದಿದ್ದು, ಕರಡಿ, ಚಿರತೆಗಳು ಅಡಗಿರುವ ಶಂಕೆಯಿಂದ ಹೊಲಕ್ಕೆ ಹೋಗಲು ಭಯ ಪಡುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.