ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿ ಸುತ್ತ ಔಡಲ ಬೆಳೆಗೆ ಕೋರಿ ಹುಳುಬಾಧೆ ತೀವ್ರವಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಶೇಂಗಾಕ್ಕೂ ಹುಳುಬಾಧೆ ಹರಡುವ ಭೀತಿ ಎದುರಾಗಿದೆ.
ಗ್ರಾಮದ ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರದ ಮೂಲಕ ಕೋನಸಾಗರ ಸಂಪರ್ಕಿಸುವ ರಸ್ತೆಯಲ್ಲಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ಹೆಚ್ಚು ಹುಳುಬಾಧೆ ಕಂಡುಬಂದಿದೆ. ಯೂನಸ್ ಖಾನ್, ಕಾಂತಾ, ತಿಪ್ಪೇಸ್ವಾಮಿ ಸೇರಿದಂತೆ ಹಲವು ರೈತರ 40ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿನ ಬೆಳೆಯು ಪೂರ್ಣ ಹುಳು ತಿಂದು ಬರೀ ಕಡ್ಡಿ ಕಾಣಿಸುತ್ತಿದೆ. ಹಾಕಿದ್ದ ಬಂಡವಾಳ ಸಂಪೂರ್ಣ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಗೊಬ್ಬರದ ಅಂಗಡಿಗಳಲ್ಲಿ ಸೂಚಿಸುವ ಔಷಧಗಳನ್ನು ಸಿಂಪಡಣೆ ಮಾಡಲಾಗಿದೆ. ಆದರೂ ಹುಳು ಬಾಧೆ ಹತೋಟಿಗೆ ಬಂದಿಲ್ಲ. ಈಗ ಔಡಲ ಗಿಡದ ಹೊಲ ಮುಗಿಸಿ ಪಕ್ಕದ ಶೇಂಗಾ ಹೊಲಗಳತ್ತ ಹುಳುಗಳು ತೆರಳುತ್ತಿವೆ. ಪರಿಣಾಮ ರೈತರು ತೀವ್ರ ಆತಂಕ ದುಪ್ಪಟ್ಟು ಆಗಿದೆ. ಈ ಬಗ್ಗೆ ಸ್ಥಳ ಭೇಟಿ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ.
ಶೇಂಗಾಕ್ಕೆ ಹುಳುಬಾಧೆ ಹಬ್ಬುವ ಮುನ್ನವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೆಚ್ಚಿನ ನಷ್ಟವಾಗಲಿದೆ. ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.