ADVERTISEMENT

ಕೊರೊನಾ ಲಕ್ಷಣ ಇದ್ದರಷ್ಟೇ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 16:31 IST
Last Updated 27 ಜನವರಿ 2022, 16:31 IST
   

ಬೆಂಗಳೂರು: ಕೆಮ್ಮು, ಜ್ವರ ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣಗಳು ಇದ್ದವರಿಗೆ ಸಮುದಾಯದ ಹಂತದಲ್ಲಿ ಕೊರೊನಾ ಪರೀಕ್ಷೆ ನಡೆಸಬೇಕು. ಲಕ್ಷಣ ಇರದಿದ್ದರೆ ಪರೀಕ್ಷೆಯಿಂದ ವಿನಾಯಿತಿ ನೀಡಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಬಗ್ಗೆ ಇಲಾಖೆಯ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ. ‘ಕೊರೊನಾ ಸೋಂಕಿತರನ್ನು ತ್ವರಿತವಾಗಿ ಪತ್ತೆಮಾಡಿ, ಆರೈಕೆ ನೀಡಬೇಕು. ಹೀಗಾಗಿ, ಪರೀಕ್ಷಾ ಕಾರ್ಯತಂತ್ರವನ್ನು ಪರಿಷ್ಕರಿಸಲಾಗಿದೆ. ಕೋವಿಡ್ ಪೀಡಿತ ವ್ಯಕ್ತಿಗಳ ಸಂಪರ್ಕಿತರು ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೊಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಅಂತಹವರಿಗೆ ಸಮುದಾಯದ ಹಂತದಲ್ಲಿ ಪರೀಕ್ಷೆ ನಡೆಸಬೇಕು. ವಿದೇಶಕ್ಕೆ ತೆರಳುತ್ತಿರುವ ವ್ಯಕ್ತಿಗಳು ಹಾಗೂ ವಿದೇಶದಿಂದ ಬಂದವರಿಗೂ ಪರೀಕ್ಷೆ ಮಾಡಬೇಕು’ ಎಂದು ಹೇಳಿದ್ದಾರೆ.

‘ಆರೋಗ್ಯ ಸಂಸ್ಥೆಗಳಲ್ಲಿ ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ತುರ್ತು ವೈದ್ಯಕೀಯ ಆರೈಕೆಯ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ಅಲಭ್ಯತೆಯಿಂದ ಬೇರೆ ಸಂಸ್ಥೆಗೆ ವ್ಯಕ್ತಿಯನ್ನು ಶಿಫಾರಸು ಮಾಡಬಾರದು. ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿಯೇ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಅನ್ಯ ಕಾಯಿಲೆಗಳ ಚಿಕಿತ್ಸೆಗೆ ಬರುವ ರೋಗಿಗಳಿಗೆ ಕೋವಿಡ್ ಲಕ್ಷಣ ಇರದಿದ್ದರೆ ಪರೀಕ್ಷೆ ಮಾಡಬೇಕಾದ ಅಗತ್ಯವಿಲ್ಲ’ ಎಂದು ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.