ವಿಟ್ಲ: ಅಡ್ಯನಡ್ಕ ವಾರಾಣಾಸಿ ಕೃಷಿ ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಕಾರದೊಂದಿಗೆ ಗೋಳ್ತಮಜಲು ಸಾವಯವ ಗ್ರಾಮ ಹಾಗೂ ನ್ಯೂ ಕರ್ನಾಟಕ ಗುಂಪಿನ ಸದಸ್ಯರಿಗೆ ಇತ್ತೀಚೆಗೆ ಪ್ರಗತಿಪರ ಸಾವಯವ ಕೃಷಿ ಕ್ಷೇತ್ರಗಳಿಗೆ ಅಧ್ಯಯನ ಪ್ರವಾಸವನ್ನು ವಾರಣಾಶಿ ಸಂಸ್ಥೆಯವರು ಏರ್ಪಡಿಸಿದ್ದರು.
ಈ ಪ್ರವಾಸಕ್ಕೆ ಗೋಳ್ತಮಜಲು ಸಾವಯವ ಗ್ರಾಮದ ಸದಸ್ಯರಲ್ಲದೆ ವಾರಣಾಶಿ ಸಾವಯವ ಕೃಷಿಕರ ಸಂಘದ ನ್ಯೂ ಕರ್ನಾಟಕ ಫಾರ್ಮರ್ಸ್ ಗುಂಪಿನ ಸದಸ್ಯರೂ ಭಾಗವಹಿಸಿ ವಿಶೇಷ ಆಸಕ್ತಿಯಿಂದ ಕೃಷಿಕ್ಷೇತ್ರಗಳಿಗೆ ಭೇಟಿ ನೀಡಿದರು.
ಶಂಕರ ಸಾರಡ್ಕ ಅವರ ಮನೆಯಲ್ಲಿ ವ್ಶೆಜ್ಞಾನಿಕವಾಗಿ ಕಡಿಮೆ ಖರ್ಚಿನಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಎಂ.ಎಸ್.ಭಟ್ ಮಾದರಿ ಡ್ರೈಯರ್ನ ಬಗ್ಗೆ ಚಿಂತನ್ ಸಾರಡ್ಕ ವಿವರಣೆ ನೀಡಿದರು.
ಪುಣಚ ಗ್ರಾಮದ ಸುರೇಶ್ ಗೌಡರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು. ಹೈನುಗಾರಿಕೆಯ ವಿಶೇಷ ಸಾಧಕ ಸಂಜೀವ ಬಂಟರ ಕೃಷಿ ಕ್ಷೇತ್ರವನ್ನು ಸಂದರ್ಶಿಸಲಾಯಿತು.
ಕೃಷಿಪಂಡಿತ ಪ್ರಶಸ್ತಿ ವಿಜೇತ ಕೃಷಿಕ ಅಮೈ ಮಹಾಲಿಂಗ ನಾಯ್ಕರು ಏಕಾಂಗಿಯಾಗಿ ನಿರ್ಮಿಸಿದ ಸಮೃದ್ಧ ಕೃಷಿಕ್ಷೇತ್ರ ಸಾಧನೆ ಬಗ್ಗೆ ರೈತರಿಗೆ ವಿವರಿಸಲಾಯಿತು. ಕೊನೆಯಲ್ಲಿ ವಾರಣಾಶಿಯ ಮರಕ್ಕಿಣಿ ತೋಟಕ್ಕೆ ಸಂದರ್ಶನ ನೀಡಲಾಯಿತು.
ಇಲ್ಲಿನ ಮಿಶ್ರ ಬೇಸಾಯ ಮತ್ತು ಸಾವಯವ ಕೃಷಿ ಪೂರಕ ಚಟುವಟಿಕೆಗಳನ್ನು ಸಂದರ್ಶಕ ರೈತರಿಗೆ ವಿವರಿಸಲಾಯಿತು. ಪ್ರಾತ್ಯಕ್ಷಿಕೆ ಹಾಗೂ ಮಾದರಿಗಳನ್ನು ತೋರಿಸಲಾಯಿತು. ವಾರಣಾಸಿ ಕೃಷಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ರೈತರಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.