ಮೂಲ್ಕಿ: ಕಿನ್ನಿಗೋಳಿಯ ಸಾಹಿತ್ಯ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡಿರುವ ಅನಂತ ಪ್ರಕಾಶ ಸಂಸ್ಥೆಯು ಪ್ರತಿ ವರ್ಷವೂ ಸಾಹಿತ್ಯ ಸಾಧಕರಿಗೆ ನೀಡುವ ಅನಂತ ಪ್ರಕಾಶ ಪುರಸ್ಕಾರಕ್ಕೆ ಈ ಬಾರಿ ತುಮಕೂರಿನ ಡಾ. ಕವಿತಾ ಕೃಷ್ಣರನ್ನು ಆಯ್ಕೆಯಾಗಿದ್ದಾರೆ ಎಂದು ಅನಂತ ಪ್ರಕಾಶನ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವಿತಾ ಕೃಷ್ಣ ಅವರು ವೃತ್ತಿಯಲ್ಲಿ ಕನ್ನಡ ಪಂಡಿತರು. ಪ್ರವೃತ್ತಿಯಲ್ಲಿ ಸಾಹಿತಿಗಳು ಹಾಗೂ ಉತ್ತಮ ಭಾಷಣಕಾರರು ಆಗಿದ್ದಾರೆ. ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಕಥೆ, ಕವನ, ಕಾದಂಬರಿ ಚರಿತ್ರೆ, ಶಿಕ್ಷಣ, ನಾಟಕ, ಸಂಶೋಧನೆ, ಸಂಪಾದನೆ, ಮಕ್ಕಳ ಸಾಹಿತ್ಯ ಹೀಗೆ ಅನೇಕ ಪ್ರಕಾರಗಳ ಸಾಹಿತ್ಯ ಕೃಷಿ ಮಾಡಿದ್ದು, 188 ಕೃತಿಗಳನ್ನು ಬರೆದಿದ್ದಾರೆ.
ಮನೆಯನ್ನೆ ಸಾಹಿತ್ಯ ಮಂದಿರವನ್ನಾಗಿ ಮಾಡಿ ಕನ್ನಡ ಗೀತೋತ್ಸವ ಮಾಡುತ್ತಿದ್ದಾರೆ. ದೇಶ ವಿದೇಶಗಳನ್ನು ಸುತ್ತಾಡಿ ಕನ್ನಡ ಯಾತ್ರೆ ಮಾಡಿದ್ದಾರೆ. ಏಪ್ರಿಲ್ 27 ರಂದು ಕಿನ್ನಿಗೋಳಿಯ 'ಅನಂತ ಪ್ರಕಾಶ' ಸಂಸ್ಥೆಯು 2019 ನೇ ಸಾಲಿನ ಅನಂತ ಪ್ರಕಾಶ ಪುರಸ್ಕಾರ ನೀಡಿ ಗೌರವಿಸಲಿದೆ. ಅನಂತ ಪ್ರಕಾಶ ಪುರಸ್ಕಾರವು ₹10 ಸಾವಿರ ನಗದು ಹಾಗೂ ಪುರಸ್ಕೃತರ ಕುರಿತಾದ ಅಭಿನಂದನಾ ಕೃತಿಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.