ADVERTISEMENT

ಅಪಸ್ವರದ ನಡುವೆ ‘ಆಮ್ ಆದ್ಮಿ’ ನಾಮಪತ್ರ

ಜಿಲ್ಲಾ ಘಟಕದ ಸ್ಥಾಪಕ ಸಂಚಾಲಕನ ಟೋಪಿ ಕಿತ್ತ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 11:15 IST
Last Updated 23 ಮಾರ್ಚ್ 2014, 11:15 IST

ಮಂಗಳೂರು: ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ಆರ್‌.ವಾಸುದೇವ್‌ ಅವರು ಶನಿವಾರ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಸ್ಥಾಪಕ ಸಂಚಾಲಕ ರಾಬರ್ಟ್‌ ರೊಸಾ­ರಿಯೊ ಅವರು ಅಪಸ್ವರ ಎತ್ತಿದ್ದರಿಂದ ನಾಮ­ಪತ್ರ ಸಲ್ಲಿಕೆ ವೇಳೆ ನೂಕುನುಗ್ಗಾಟ ನಡೆದು ಗೊಂದಲದ ವಾತಾವರಣ ನಿರ್ಮಾಣ­ವಾಯಿತು.

ಪಕ್ಷವು ಜಿಲ್ಲೆಯಲ್ಲಿ ಮೊದಲ ಬಾರಿ ಚುನಾ­ವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅನು­ಭವದ ಕೊರತೆ ಕಂಡುಬಂತು. ಒಬ್ಬರು ಪಕ್ಷದ ಕಚೇರಿಯಲ್ಲಿ ಕುಳಿತು ನಿದ್ದೆ ಹೋಗಿದ್ದರೆ, ಇನ್ನೊ­ಬ್ಬರು ಪತ್ರಿಕೆಗಳಲ್ಲಿ ಬರುವ ‘ಪದ­ಬಂಧ’ದ ಅಕ್ಷರ ಜೋಡಿಸುವುದರಲ್ಲಿ ತಲ್ಲೀನ­ರಾಗಿದ್ದರು.

ಕಚೇರಿಯಿಂದ ಅಭ್ಯರ್ಥಿ ಹೊರಟಾಗ ನಾಯಕರೊಬ್ಬರು ಹಿಂದಕ್ಕೆ ಓಡಿ, ‘ಸಮ್‌ ಬಡಿ ಕ್ಯಾರಿ ಸಮ್‌ ಪ್ಯಾಂಪ್ಲೆಟ್ಸ್‌ ಯಾರ್‌’ (ಯಾರಾ­ದರೂ ಕರಪತ್ರ ಹಿಡಿದುಕೊಳ್ಳಿ) ಎಂದು ಕೂಗಿದರು. ಇನ್ನೂ ಕೆಲವರು ಕಾರ್ಯಕರ್ತರ ತಲೆಗೆ ‘ಆಮ್‌ ಆದ್ಮಿ’ ಟೋಪಿ ಹಾಕುವುದರಲ್ಲಿ ತಲ್ಲೀನರಾಗಿದ್ದರು.

ಪಾದಯಾತ್ರೆ– ಬಸ್‌ ಪಯಣ: ಪಕ್ಷದ ಅಭ್ಯರ್ಥಿ ಮತ್ತು ಬೆಂಬಲಿಗರು ಬಲ್ಮಠದ ಕಚೇರಿಯಿಂದ ಹಂಪನಕಟ್ಟೆವರೆಗೆ ಪಾದ­ಯಾತ್ರೆಯಲ್ಲಿ ಸಾಗಿ, ಬಳಿಕ ಸಿಟಿ ಬಸ್‌ನಲ್ಲಿ ಪ್ರಯಾಣಿಸಿದರು. ನಾಯಕರು ನಾಮಪತ್ರದ ಜತೆ ಸಲ್ಲಿಸುವ ಪ್ರಮಾಣಪತ್ರವನ್ನು ನೋಟರಿ ಅವರಿಂದ ದೃಢೀಕರಿಸುವುದನ್ನೇ ಮರೆತಿದ್ದರು. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಸುಮಾರು ಒಂದು ತಾಸು ಕಾಯಬೇಕಾಯಿತು.

ಅಷ್ಟರಲ್ಲಿ ನಾಟಕೀಯ ಬೆಳವಣಿಗೆ ನಡೆ­ಯಿತು. ಪಕ್ಷದ ಜಿಲ್ಲಾ ಘಟಕದ ಸಂಸ್ಥಾಪಕ ರಾಬರ್ಟ್‌ ರೊಸಾರಿಯೊ ಅವರು, ‘ಎಂ.­ಆರ್‌.­ವಾಸುದೇವ್‌ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯೇ ಅಲ್ಲ. ಅವರಿಗೆ ಪಕ್ಷದ ಬಿ.ಫಾರ್ಮ್‌ ಇನ್ನೂ ಸಿಕ್ಕಿಲ್ಲ. ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ಇದೆ’ ಎಂದು ಸುದ್ದಿ­ಗಾರರಿಗೆ ತಿಳಿಸಿದರು.

‘ವಾಸುದೇವ್‌ ಅವರು ಸಂಘ ಪರಿವಾರದ ಅಭ್ಯರ್ಥಿ. ಬಿಜೆಪಿಯ ‘ನಮೋ ಬ್ರಿಗೇಡ್‌’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗ­ವಹಿಸಿದ್ದ ಬಗ್ಗೆ ನಾನು ವರಿಷ್ಠರಿಗೆ ದೂರು ನೀಡಿದ್ದೇನೆ. ಅವರ ಆಯ್ಕೆಯೂ ಪಕ್ಷದ ನಿಯಮ ಪ್ರಕಾರ ಆಗಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ­ಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಆಹ್ವಾನಿಸಬೇಕು. ಆದರೆ, ಇವರ ಆಯ್ಕೆಯನ್ನು ಗುಟ್ಟಾಗಿ ನಡೆಸಿ ಮತ್ತೆ ಹೆಸರು ಪ್ರಕಟಿಸ­ಲಾಗಿದೆ.  ಇದು ಒಂದು ರೀತಿ ಎತ್ತಿನ ಮುಂದೆ ಗಾಡಿ ಕಟ್ಟಿದಂತೆ’ ಎಂದು ಆರೋಪಿಸಿದರು.

ಅಷ್ಟರಲ್ಲಿ ರಾಬರ್ಟ್‌ ಅವರನ್ನು ಸುತ್ತು­ವರಿದ ‘ಆಮ್‌ ಆದ್ಮಿ’ಗಳ ಗುಂಪು, ‘ ಇವ ನಮ್ಮ ಪಕ್ಷದವನೇ ಅಲ್ಲ. ಇವನಿಗೆ ಪಕ್ಷದ ಟೋಪಿ ನೀಡಿದ್ದು ಯಾರು?’ ಎಂದು ಅವರ ಟೋಪಿಯನ್ನು ಹಾಗೂ ಕನ್ನಡಕವನ್ನು ಕಿತ್ತು ತೆಗೆದು ಹಲ್ಲೆಗೆ ಮುಂದಾಯಿತು. ಅಷ್ಟರಲ್ಲಿ ಪಕ್ಷದ ಮುಖಂಡರು ಸಿಟ್ಟಿಗೆದ್ದ ಬೆಂಬಲಿಗರನ್ನು ಸಮಾಧಾನ ಪಡಿಸಿದರು.

‘ರಾಬರ್ಟ್‌ ಅವರನ್ನು ಪಕ್ಷದಿಂದ ಉಚ್ಛಾಟಿ­ಸಲಾಗಿದೆ. ಅವರ ಮಾತಿಗೆ ಬೆಲೆ ಕೊಡಬೇಕಿಲ್ಲ. ಅವರಿಗೆ ಟಿಕೆಟ್‌ ಸಿಕ್ಕಿಲ್ಲ ಎಂಬ ಹತಾಶೆಯಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ’ ಎಂದು ಪಕ್ಷದ ಪ್ರಚಾರ ಅಭಿಯಾನದ ವ್ಯವಸ್ಥಾಪಕ ಜಯ­ಪ್ರಕಾಶ್‌ ರಾವ್‌ ಸುದ್ದಿಗಾರರಿಗೆ ತಿಳಿಸಿ­ದರು.

ಈ ಗೊಂದಲಗಳ ನಡುವೆಯೇ ಎಂ.­ಆರ್‌.­­­ವಾಸುದೇವ ಅವರು ನಾಮಪತ್ರ ಸಲ್ಲಿಸಿದರು. ‘ನಾನು ಈ ಹಿಂದೆ ಆರ್ಥಿಕ ಅಭಿವೃದ್ಧಿ ಕುರಿತು ನಮೋ ಬ್ರಿಗೇಡ್‌ ಹಮ್ಮಿ­ಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜ. ಆಗ ಪಕ್ಷದ ಕಾರ್ಯಕರ್ತನಲ್ಲ. ಸಾಮಾನ್ಯ ಪ್ರಜೆಯ ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕ್ರಮಗಳಲ್ಲಿ  ಭಾಗವ­ಹಿಸುವುದೂ ತಪ್ಪಲ್ಲ. ಪಕ್ಷಕ್ಕೆ ಸೇರಿದ ಬಳಿಕ ಅದರ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ.

ಭ್ರಷ್ಟಾ­ಚಾರ ನಿರ್ಮೂಲನೆ, ಸೌಜನ್ಯಾ ಕೊಲೆ ಪ್ರಕರ­ಣದ  ಹೋರಾಟದ ವಿಷಯದಲ್ಲಿ ಪಕ್ಷದ ಹಿಂ­ದಿನ ನಿಲುವಿನಲ್ಲಿ ಯಾವುದೇ ವ್ಯತ್ಯಾಸ­ವಾಗಿಲ್ಲ. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾ­ಡುವ ವಿಚಾರ­ದಲ್ಲಿ ರಾಜಿ ಇಲ್ಲ. ನೈತಿಕ ಪೊಲೀಸ್‌­ಗಿರಿಗೆ ಬೆಂಬಲವಿಲ್ಲ. ಸಂವಿಧಾನದ ಆಡಳಿತ ನಡೆಯ­ಬೇಕು’ ಎಂದರು.

‘ಅಪಸ್ವರ ಎಲ್ಲ ಪಕ್ಷ­ದಲ್ಲೂ ಇದ್ದದ್ದೇ. ಈ  ಬಗ್ಗೆ ತಲೆ ಕೆಡಿಸಿ­ಕೊಳ್ಳು­ವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿ ಸಾಮ­ರಸ್ಯ­ದಿಂದ ಪಕ್ಷ ಕಟ್ಟುತ್ತೇನೆ. ಇದೇ 26ರ ಒಳಗೆ ಬಿ–ಫಾರ್ಮ್‌ ಅನ್ನೂ ಸಲ್ಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.