ಬೆಳ್ತಂಗಡಿ: ವಿಧಾನಸಭಾ ಚುನಾವಣೆಯಲ್ಲೆ ಶೇ 100 ರಷ್ಟು ಮತದಾನ ಮಾಡುವ ಗುರಿಯನ್ನು ಚುನಾವಣಾ ಆಯೋಗ ಇಟ್ಟುಕೊಂಡಿದೆ. ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಮತದಾನಕ್ಕೆ ನಿಯೋಜಿಸಿದ ಎಲ್ಲಾ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಬೇಕು ಎಂದು ಜಿಲ್ಲಾ ಮುಖ್ಯ ಪಂಚಾಯಿತಿ ಸಿಇಒ ಡಾ. ಎಂ.ಆರ್ ರವಿ ಹೇಳಿದ್ದಾರೆ.
ಬುಧವಾರ ಗುರುವಾಯನಕೆರೆ ನಮ್ಮ ಮನೆ ಹವ್ಯಕದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮಂಗಳೂರು ಇದರ ವತಿಯಿಂದ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪಿಎಟಿ ಯಂತ್ರದ ಬಳಕೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬ್ಯಾಗ್ ತಂಡದ ಸದಸ್ಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣಾ ಆಯೋಗದ ಘೋಷಣೆಯಂತೆ ಎಲ್ಲಾ ಸಮುದಾಯ ಒಳಗೊಳ್ಳುವ ಸುಗಮ ನೈತಿಕ ಚುನಾವಣೆ ಎಂಬಂತೆ ಈ ಬಾರಿ ಚುನಾವಣೆ ನಡೆಯಲಿದೆ. ಮತದಾರರಿಗೆ ಮತದಾನದ ದೃಢೀಕರಣವಾಗಲು ಅದಕ್ಕೆ ಬೇಕಾದ ಯಂತ್ರಗಳು ಬಳಕೆಯಾಗಲಿದೆ. ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದ್ದಾರೆ. ಯಾರೂ ಮತದಾನದ ಹಕ್ಕಿನಿಂದ ವಂಚಿರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ವಯಸ್ಸಾದವರು ಮತ್ತು ಅಂಗವಿಕಲರು ಮತದಾನ ಮಾಡುಲು ಪ್ರೋತ್ಸಾಹಿಸುವಂತೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸಮೀಕ್ಷೆ ಮಾಡಲಾಗಿದೆ. ಎಲ್ಲರೂ ಮತದಾನ ಪೂರ್ವವಾಗಿ ಮತಯಂತ್ರದ ಬಳಕೆ ಬಗ್ಗೆ ತಿಳಿಯಬೇಕಾಗಿದ್ದು ಇದಕ್ಕಾಗಿ ಅಲ್ಲಲ್ಲಿ ಮತಯಂತ್ರ ಪ್ರಾತ್ಯಕ್ಷಿಕೆ ಮಾಡಲಾಗುತ್ತಿದೆ ಏ30 ರತನಕ ನಡೆಯಲಿದೆ ಎಂದು ಅವರು ಹೇಳಿದರು.
ಕೆಲವು ಕಡೆ ಮತಯಂತ್ರ ದುರ್ಬಳಕೆಯ ಬಗ್ಗೆ ಆರೋಪಗಳು ಬರುತ್ತಿವೆ. ಈ ಸಂಶಯ ನಿವಾರಣೆಗಾಗಿ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ನಿರ್ಣಯದಂತೆ ವಿವಿ ಪ್ಯಾಟ್ ಯಂತ್ರ ಬಳಕೆಯಾಗುತ್ತಿದೆ. ಇದರಲ್ಲಿ ಎಲ್ಲ ದಾಖಲೆಗಳನ್ನು ಯಾವುದೇ ಸಂದರ್ಭದಲ್ಲಿ ಪರಿಶೀಲಿಸುವ ಅವಕಾಶವಿದೆ ಎಂದರು.
ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಸವ ರಾಜ ಕೆ ಅಯ್ಯಣ್ಣನವರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುಂದರ ಪೂಜಾರಿ ಇದ್ದರು. ಶಿಕ್ಷಕ ಧರಣೇಂದ್ರ ಕುಮಾರ್ ತಾಲೂಕು ಚುನಾವಣಾ ಮತಗಟ್ಟೆಗಳು ಮತ್ತು ಅಧಿಕಾರಿಗಳು ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಸಂಯೋಜಕ ಜಯನಂದ ಲಾೈಲ ಕಾರ್ಯಕ್ರಮ ನಿರೂಪಿಸಿದರು. ಮತಯಂತ್ರ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.