ADVERTISEMENT

ಎಂಡೊ ಸಂತ್ರಸ್ತರಿಗೆ ಸವಲತ್ತು ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:35 IST
Last Updated 20 ಅಕ್ಟೋಬರ್ 2012, 4:35 IST

ಆಲಂಕಾರು (ಉಪ್ಪಿನಂಗಡಿ): ಪುತ್ತೂರು ಸಿಟಿ ರೋಟರಿ ಕ್ಲಬ್ ವತಿಯಿಂದ ಆಲಂಕಾರು ಪರಿಸರದಲ್ಲಿರುವ ಎಂಡೊ ಸಂತ್ರಸ್ತರಿಗೆ ಶೌಚಾಲಯ, ವಿದ್ಯುತ್ ಸಂಪರ್ಕ, ಹೊಲಿಗೆ ಯಂತ್ರ ಹಾಗೂ ಕುಡಿಯುವ ನೀರಿನ ಟ್ಯಾಂಕ್ ಸೇರಿದಂತೆ ವಿವಿಧ ಸವಲತ್ತುಗಳ ಹಸ್ತಂತರಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.

ಆಲಂಕಾರಿನ ಎಂಡೊ ವಿರೋಧಿ ಹೋರಾಟ ಸಮಿತಿ ಮೂಲಕ ಸಂತ್ರಸ್ತರನ್ನು ಆಯ್ಕೆ ಮಾಡಿ ಸವಲತ್ತುಗಳನ್ನು ವಿತರಿಸಲಾಯಿತು. ಪೆರಾಬೆ ಗ್ರಾಮದ ಪರಾರಿ ಮೋನಪ್ಪ ಗೌಡ, ರಾಮಕುಂಜ ಗ್ರಾಮದ ಕುಂಡಾಜೆ ದೇವಕಿ, ಪೆರಾಬೆ ಗ್ರಾಮದ ಸುರುಳಿ ಕಟ್ಟೆ ಆಸಿಫ್ ಪುತ್ತುಮೋನು ಅವರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಯಿತು.

ಪೆರಾಬೆ ಗ್ರಾಮದ ಕುಪ್ಲಾಜೆ ಬಾಲಪ್ಪ, ಆಲಂಕಾರು ಗ್ರಾಮದ ಶರವೂರು ಶೀನಪ್ಪ ಗೌಡ, ಆಲಂಕಾರು ಗ್ರಾಮದ ಮುಂಡ್ರೇಲ್ ಜಯರಾಮ ಗೌಡ, ಆಲಂಕಾರು ಗ್ರಾಮದ ನಗ್ರಿ ಭಾಸ್ಕರ, ಪೆರಾಬೆ ಗ್ರಾಮದ ರವೀಂದ್ರ ರೈ ಅವರಿಗೆ ರೋಟರಿ ಬೆಳಕು ವಿದ್ಯುತ್ ಸಂಪರ್ಕ ನೀಡಲಾಯಿತು. ರಾಮಕುಂಜ ಗ್ರಾಮದ ಕುಂಡಾಜೆ ದೇವಕಿ ಅವರಿಗೆ ಕುಡಿಯುವ ನೀರಿನ ಟ್ಯಾಂಕ್ ಹಸ್ತಾಂತರಿಸಲಾಯಿತು.

ಆಲಂಕಾರು ಗ್ರಾ.ಪಂ. ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಹಳೆನೇರಂಕಿ ಗ್ರಾಮದ ಬರೆಂಬೆಟ್ಟು ಸುಜಾತರವರಿಗೆ ಹೊಲಿಗೆ ಯಂತ್ರ ನೀಡಲಾಯಿತು. ರೋಟರಿ ಸಹಾಯಕ ಗವರ್ನರ್ ಎ.ಎನ್. ಮಧ್ಯಸ್ಥ ಮಾತನಾಡಿ ಸ್ವಉದ್ಯೋಗಕ್ಕಾಗಿ ಮತ್ತು ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕು ಎಂಬ ಧ್ಯೇಯದೊಂದಿಗೆ ಈ ಹೊಲಿಗೆ ಯಂತ್ರವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಂಡೊ ಸಂತ್ರಸ್ಥರಿಗೆ ಇನ್ನಷ್ಟು ಸಹಾಯ ಮಾಡಲಾಗುವುದು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜಿ.ಪಂ. ಸದಸ್ಯ ಬಾಲಕೃಷ್ಣ ಸುವರ್ಣ, ರೋಟರಿ ಪುತ್ತೂರು ಸಿಟಿಯ ಅಧ್ಯಕ್ಷ ಸಂತೋಷ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಾರತ್ನ ವಸಂತ್, ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಗೌಡ ಇದ್ದರು. ಎಂಡೋ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಸ್ವಾಗತಿಸಿ, ಪದ್ಮನಾಭ ಆಲಡ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.