ಮಂಗಳೂರು: ಕದ್ರಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮ 2019ರಲ್ಲಿ ನಡೆಯಲಿದ್ದು ಅದನ್ನು ಅದ್ದೂರಿಯಾಗಿ ಆಯೋಜಿಸಲು ಪೂರ್ವ ತಯಾರಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ಅವಶ್ಯಕ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಅವರು ಮಾತನಾಡಿದರು. ‘ಬ್ರಹ್ಮಕಲಶ ಕಾರ್ಯಕ್ರಮ ಈ ಭಾಗದ ಜನರಿಗೆ ಮಹತ್ವವಾಗಲಿದೆ. ಅದಕ್ಕೆ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು. ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ’ ಎಂದರು.
‘ಕದ್ರಿ ದೇವಸ್ಥಾನವೆಂದರೆ ಜನರಿಗೆ ವಿಶೇಷ ಭಾವನೆ ಇದೆ. ಇಲ್ಲಿಗೆ ಬರುವ ಭಕ್ತರು ಯಾವುದೇ ಅನನುಕೂಲಕ್ಕೆ ಒಳಗಾಗಬಾರದು ಎನ್ನುವುದನ್ನು ನಾವು ಎಚ್ಚರಿಕೆಯಿಂದ ನೋಡಬೇಕು. ಏನೆಲ್ಲಾ ಕೆಲಸಗಳು ಇಲ್ಲಿ ಆಗಬೇಕು ಎನ್ನುವುದನ್ನು ಸೂಚಿಸಿದರೆ ಶಾಸಕನಾಗಿ ಮಾಡಲು ಸಿದ್ಧ’ ಎಂದರು.
ದೇವಸ್ಥಾನ ಅಭಿವೃದ್ಧಿ ಕಾಮಗಾರಿ, ಕದ್ರಿ ಸ್ಮಶಾನ ಅಭಿವೃದ್ಧಿ, ದೇವಸ್ಥಾನದ ಬಳಿ ಸಂಚಾರ ಸಮಸ್ಯೆಗಳ ಬಗ್ಗೆ ಅವರು ಸ್ಥಳೀಯರೊಂದಿಗೆ ಚರ್ಚಿಸಿದರು. ಎ.ಸಿ ಪ್ರಮೀಳಾ, ಆಡಳಿತಾಧಿಕಾರಿ ನಿಂಗೇಗೌಡ, ಟ್ರಸ್ಟಿಗಳಾದ ಸುರೇಶ್ ಕುಮಾರ್ ಕದ್ರಿ, ಚಂದ್ರ ಕಲಾ, ದಿನೇಶ್ ದೇವಾಡಿಗ, ಪೇಜಾವರ, ಪುಷ್ಪಲತಾ ಶೆಟ್ಟಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಮುಂತಾದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.