ADVERTISEMENT

ಕಾಂಗ್ರೆಸ್ ಜನ ವಿರೋಧಿ ಧೋರಣೆಗೆ ತಕ್ಕ ಉತ್ತರ

ಅಭಿನಂದನಾ ಸಭೆ: ಶಾಸಕ ಮಠಂದೂರು ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 5:00 IST
Last Updated 11 ಜೂನ್ 2018, 5:00 IST

ಪುತ್ತೂರು: ಐದು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತರ ಕೊಲೆ, ದೈವ ದೇವರುಗಳಿಗೆ ಅಪಮಾನ, ಮಹಿಳಾ ದೌರ್ಜನ್ಯ, ಗೋಹತ್ಯೆ ಜನರ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.

ಪುತ್ತೂರು ತಾಲ್ಲೂಕಿನ ಪಡ್ನೂರು ಬಿಜೆಪಿ ಗ್ರಾಮ ಸಮಿತಿಯ ವತಿಯಿಂದ ಭಾನುವಾರ ಪೆರ್ವೋಡಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಚುನಾವಣೆಯ ಪೂರ್ವದಲ್ಲಿ ಉತ್ತರ ದ್ರುವಕ್ಕೊಂದು ದಕ್ಷಿಣ ದ್ರುವಕ್ಕೊಂದು ಮುಖ ಮಾಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗ ಬಾಯಿ ಬಾಯಿ ಆಗಿದೆ. ಈ ಸಮ್ಮಿಶ್ರ ಸರ್ಕಾರ ತಾತ್ಕಾಲಿವಾಗಿದೆ. ರಾಜ್ಯದ ಜನರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ . ಈ ಸರ್ಕಾರ ಆರು ತಿಂಗಳ ಕಾಲ ಮಾತ್ರ ಆಡಳಿತ ನಡೆಸಲಿದ್ದು, ಬಳಿಕ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು ರೈತರ ಸಾಲ ಮನ್ನಾ, ಕುಮ್ಕಿ ಹಕ್ಕು, ಅಕ್ರಮ ಸಕ್ರಮ ಮೊದಲಾದ ಸೌಲಭ್ಯಗಳು ರಾಜ್ಯದ ಜನತೆಗೆ ದೊರೆಯಲಿದೆ ಎಂದರು.

ADVERTISEMENT

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಿಗೆ ಸಂಬಂಧಿಸಿ ಸುಮಾರು ₹ 100 ಕೋಟಿಯಷ್ಟು ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲು ಬಾಕಿಯಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಕಿಯಿರುವ ಮೊತ್ತವನ್ನು ಈಗಿನ ಶಾಸಕರು ಪಾವತಿಸಬೇಕಾಗಿದೆ. ಇದರಿಂದಾಗಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳನ್ನು ನಡೆಯುವುದು ಅಸಾಧ್ಯ. ಹಾಗಿದ್ದರೂ ನಾನು ಪ್ರೀತಿ ವಿಶ್ವಾಸದ ರಾಜಕಾರಣ ನಡೆಸುತ್ತೇನೆ, ಕ್ಷೇತ್ರದ ಜನರ ಸೇವಕನಾಗಿ ಮೂಲಭೂತ ಸೌಲಭ್ಯಗಳ ಪೂರೈಸಲು ಶ್ರಮಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಮಾತನಾಡಿದರು. ಪಡ್ನೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಜೋಯಿಸ ಯರ್ಮುಜ ಅವರು ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿದರು.

ಕುಂಜಾರು ಮದಗ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ, ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಣಿ ಡಿ.ಗಾಣಿಗ, ಸದಸ್ಯೆ ಯಶೋಧ ಟಿ.ನಾಯ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಗೌಡ ಬಜತ್ತೂರು, ಶಂಭು ಭಟ್, ನಗರ ಮಂಡಲ ಕಾರ್ಯದರ್ಶಿ ರಾಮದಾಸ ಹಾರಾಡಿ, ಶಕ್ತಿ ಕೇಂದ್ರದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಪಳ್ಳ ಮತ್ತಿತರರು ಇದ್ದರು.

ತಾಲ್ಲೂಕು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ನವೀನ್ ಮುಂಡಾಜೆ ಸ್ವಾಗತಿಸಿದರು. ಶ್ರೀಧರ ಕುಂಜಾರು ವಂದಿಸಿದರು. ಪೂವಪ್ಪ ದೇಂತಡ್ಕ ನಿರೂಪಿಸಿದರು.

ಪುತ್ತೂರಿನಲ್ಲಿ ತಕ್ಕ ಪಾಠ: ಶೆಟ್ಟಿ

ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಹಿಂದೂ ವಿರೋಧಿ ಆಡಳಿತಕ್ಕೆ ಮತ್ತು ಈ ಭಾಗದ ಕಾಂಗ್ರೆಸ್ ಪುಡಾರಿಗಳು ಅನುಸರಿಸಿರುವ ಸಂಘಟನೆಯ ಕಾರ್ಯಕರ್ತರನ್ನು ಅವಮಾನಿಸುವ, ಸುಳ್ಳು ಕೇಸುಗಳ ಮುಖಾಂತರ ಧಮನಿಸುವ ಹಾಗೂ ಅಭಿವೃದ್ಧಿಯಲ್ಲಿ ತಾರತಮ್ಯ ಎಸಗಿರುವ ನೀತಿಗೆ ಜನತೆ ನೀಡಿದ್ದು, ಇದರಿಂದಾಗಿ ಪುತ್ತೂರು ಕ್ಷೇತ್ರದಲ್ಲಿ ದಾಖಲೆಯ ಅಂತರದ ಜಯ ಬಿಜೆಪಿಗೆ ಲಭಿಸಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.