
ಕಾರ್ಕಳ: ಗೋಶಾಲೆಯಿಲ್ಲದ ದೇವಾಲಯ ಅಪೂರ್ಣ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಇಲ್ಲಿ ಹೇಳಿದರು.
ತೆಳ್ಳಾರು ರಸ್ತೆ ಶೇಷಾದ್ರಿ ನಗರದಲ್ಲಿ ವೆಂಕಟರಮಣ ಗೋಶಾಲಾ ಟ್ರಸ್ಟ್ ವತಿ ಯಿಂದ ನೂತನವಾಗಿ ನಿರ್ಮಿಸಲಾದ ವೆಂಕಟರಮಣ ಗೋಶಾಲೆಯನ್ನು ಭಾನು ವಾರ ಉದ್ಘಾಟಿಸಿ ಮಾತನಾಡಿದ ಅವರು `ನೂರು ದೇವಾಲಯ ಕಟ್ಟಿಸಿದ ಪುಣ್ಯ ಒಂದು ಗೋಶಾಲೆ ನಿರ್ಮಾಣದಿಂದ ಲಭ್ಯವಾಗುತ್ತದೆ.
ದೇವಾಲಯದಲ್ಲಿ ಒಂದೋ ಅಥವಾ ನಾಲ್ಕೈದು ದೇವರ ಸಾನ್ನಿಧ್ಯವಿದ್ದರೆ ಗೋವಿನಲ್ಲಿ 33ಕೋಟಿ ದೇವತೆಗಳ ಆವಾಸವಿದೆ. ಈ ಹಿನ್ನೆಲೆಯಲ್ಲಿ ಗೋಶಾಲೆ ಕಟ್ಟಿಸಿದರೆ ಅನಂತ ದೇವಸ್ಥಾನ ಕಟ್ಟಿಸಿದ ಪುಣ್ಯ ದೊರೆಯುತ್ತದೆ.
ಶ್ರೀನಿವಾಸ ದೇವರಿಗೂ ಗೋಮಾತೆಗೂ ಅವಿನಾಭಾವ ಸಂಬಂಧವಿದೆ. ಗೋವು ಇಲ್ಲದಿರುತ್ತಿದ್ದರೆ ಇಂದು ತಿರುಪತಿಯೂ ಇರುತ್ತಿರಲಿಲ್ಲ, ತಿರುಪತಿಯಲ್ಲಿ ಶ್ರೀನಿವಾಸನ ಸಾನ್ನಿಧ್ಯವೂ ತಿಳಿಯುತ್ತಿರಲಿಲ್ಲ. ನಮ್ಮ ಮನೆಯಲ್ಲಿ ನಾಯಿ ಸಾಕಲು ಜಾಗವಿದೆ, ದನ ಸಾಕಲು ಜಾಗ ಸಿಗದೇ~ ಎಂದು ಅವರು ಪ್ರಶ್ನಿಸಿದರು. ಪ್ರತಿಯೊಬ್ಬರೂ ಮನೆಯಲ್ಲಿ ಗೋವನ್ನು ಸಾಕಬೇಕು, ಗೋಸಾಕಲು ಸಾಧ್ಯವಾಗದವರು ಗೋಶಾಲೆಗಳಲ್ಲಿ ಸಾಕುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.
ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಗೋಶಾಲೆಗೆ ಒಂದು ಕೋಟಿ ಧನಸಹಾಯವಿತ್ತ ಗಾಜ್ರಿಯಾ ಕುಟುಂಬ ಪ್ರತಿಷ್ಠಾನದ ಅಧ್ಯಕ್ಷ ಬೆಹರಿನ್ನ ಲಾಲ್ಚಂದ ಗಾಜ್ರಿಯಾ ಅವರಿಗೆ `ಲೋಕಸೇವಾ ನಿರತ~ ಎಂಬ ಬಿರುದನ್ನಿತ್ತು ಅಭಿನಂದಿಸಲಾಯಿತು.
ಗೋಶಾಲೆಗೆ ದಾನ ನೀಡಿದ ಲಾಲ್ಚಂದ ಗಾಜ್ರಿಯಾ ಅವರನ್ನು ಸನ್ಮಾನಿಸಲಾಯಿತು.
ವೆಂಕಟರಮಣ ಗೋಶಾಲಾ ಟ್ರಸ್ಟ್ನ ಗೌರವಾಧ್ಯಕ್ಷ ವೆಂಕಟೇಶ ಪುರಾಣಿಕ, ಅಧ್ಯಕ್ಷ ಗಣಪತಿ ಹೆಗ್ಡೆ,
ಗಾಜ್ರಿಯಾ ಟ್ರಸ್ಟ್ನ ಶ್ಯಾಮ ಗಾಜ್ರಿಯಾ, ದುಬೈ ಉದ್ಯಮಿ ಪಿ.ಎಸ್.ಕಾಮತ್, ಭುವನೇಂದ್ರ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ.ರವೀಂದ್ರ ಭಟ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.