ADVERTISEMENT

ಟಿಕೆಟ್‌ ನೀಡದ ಬಸ್‌ ಮುಟ್ಟುಗೋಲು

ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 8:56 IST
Last Updated 3 ಮಾರ್ಚ್ 2018, 8:56 IST
ಪೊಲೀಸ್ ಕಮಿಷನರ್  ಟಿ.ಆರ್‌.ಸುರೇಶ್.
ಪೊಲೀಸ್ ಕಮಿಷನರ್ ಟಿ.ಆರ್‌.ಸುರೇಶ್.   

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚರಿ ಸುವ ಯಾವುದೇ ಬಸ್‌ಗಳಲ್ಲಿ ಪ್ರಯಾಣಿ ಕರಿಗೆ ಟಿಕೆಟ್‌ ನೀಡದಿದ್ದರೆ, ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್‌ ಟಿ.ಆರ್.ಸುರೇಶ್ ತಿಳಿಸಿದರು.

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ನೇರ ಫೋನ್‌– ಇನ್‌ ಕಾರ್ಯ ಕ್ರಮದಲ್ಲಿ ಭಾಗಿಯಾದ ಹಲವರು ನಾಗರಿಕರು ನಗರದ ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ನೀಡದಿರುವ ಕುರಿತು ದೂರು ಹೇಳಿದರು. ಆಗ ಉತ್ತರ ನೀಡಿದ ಕಮಿಷನರ್‌, ‘ಅಂತಹ ಬಸ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು, ಪರವಾನಗಿ ರದ್ಧತಿಗೆ ಶಿಫಾರಸು ಮಾಡು ತ್ತೇವೆ’ ಎಂದರು.

‘ಮಂಗಳೂರಿನಲ್ಲಿ ಸಂಚರಿಸುವ ನರ್ಮ್‌ ನಗರ ಸಾರಿಗೆ ಬಸ್‌ಗಳಲ್ಲಿ ಮಾತ್ರ ಸರಿಯಾಗಿ ಟಿಕೆಟ್‌ ನೀಡುತ್ತಾರೆ. ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ನೀಡುವುದು ಕಡಿಮೆ. ಟಿಕೆಟ್‌ ಕೇಳಿದರೆ ನಿರ್ವಾಹಕರು ಉಡಾಫೆಯಿಂದ ವರ್ತಿಸುತ್ತಾರೆ’ ಎಂದು ದೂರಿದರು.

ADVERTISEMENT

ಆಗ ಉತ್ತರ ನೀಡಿದ ಸುರೇಶ್, ಖಾಸಗಿ ನಗರ ಸಾರಿಗೆ ಬಸ್‌ಗಳಲ್ಲಿ ಟಿಕೆಟ್‌ ನೀಡದೇ ಇರುವುದು ಸೇರಿದಂತೆ ಹಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಬಸ್‌ ಸಿಬ್ಬಂದಿಗೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಅಲ್ಲಿ ಈ ಕುರಿತು ಸ್ಪಷ್ಟವಾಗಿ ತಿಳಿಸಲಾ ಗಿದೆ. ಆದರೂ, ಅದೇ ಸಮಸ್ಯೆ ಮರುಕಳಿಸುತ್ತಿದೆ. ಇಂತಹ ಬಸ್‌ಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಪ್ರಾರಂ ಭಿಸಲಾಗುವುದು ಎಂದರು.

‘ನಗರದ ಅತ್ರೆಬೈಲ್‌ ಪ್ರದೇಶಕ್ಕೆ ಇನ್ನೂ ಕೆಲವು ಬಸ್‌ಗಳು ಸಂಚರಿಸುತ್ತಿಲ್ಲ. ಮಧ್ಯಾಹ್ನದ ಊಟದ ಸಮಯದಲ್ಲಿ ಕೆಲವು ಬಸ್‌ನವರು ಟ್ರಿಪ್‌ ಮಾಡುತ್ತಿಲ್ಲ’ ಎಂದು ಅಲ್ಲಿನ ನಾಗರಿಕರೊಬ್ಬರು ದೂರಿದರು. ಆಗ ಪ್ರತಿಕ್ರಿಯಿಸಿದ ಕಮಿ ಷನರ್‌, ‘ಅತ್ರೆಬೈಲ್‌ ‍ಪ್ರದೇಶದಲ್ಲಿ ಬಸ್‌ ಗಳ ಸಂಚಾರದ ಮೇಲೆ ನಿಗಾ ಇರಿಸಲು ಸಿಬ್ಬಂದಿ ನೇಮಿಸಲಾಗಿದೆ. ಮತ್ತೆ ಅದೇ ಸ್ಥಿತಿ ಇದ್ದರೆ ಪತ್ತೆಹಚ್ಚಿ, ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಭರವಸೆ ನೀಡಿದರು.

ಮೂಡುಬಿದಿರೆ ಪಟ್ಟಣದಲ್ಲಿ ರಸ್ತೆಗಳ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಒಬ್ಬರು ದೂರಿದರು. ‘ಮೂಡುಬಿದಿರೆಗೆ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಇಲ್ಲ. ಕಾನೂನು ಸುವ್ಯವಸ್ಥೆ ಪೊಲೀಸ್‌ ಠಾಣೆಯ ಸಿಬ್ಬಂದಿಯೇ ಆ ಕೆಲಸವನ್ನೂ ಮಾಡಬೇಕಿದೆ. ವಾಹನ ನಿಲುಗಡೆ ಕುರಿತು ಪರಿಶೀಲಿಸುವಂತೆ ಅವರಿಗೆ ಸೂಚನೆ ನೀಡಲಾಗುವುದು’ ಎಂದರು.

ಕೊಡಿಯಾಲ್‌ಬೈಲ್‌ನಲ್ಲಿ ಜೈಲಿನ ಪರಿಸರದಲ್ಲಿ ಮೊಬೈಲ್‌ ಸಂಪರ್ಕ ಸಿಗದಂತೆ ಮಾಡಲು ಅಳವಡಿಸಿರುವ ಜಾಮರ್‌ನಿಂದ ಸ್ಥಳೀಯರಿಗೂ ತೊಂದರೆ ಆಗುತ್ತಿದೆ ಎಂದು ಸ್ಥಳೀ ಯರೊಬ್ಬರು ಅಳಲು ತೋಡಿ ಕೊಂಡರು. ಸೆಂಟ್ರಲ್‌ ಮಾರುಕಟ್ಟೆಯ ಕಲ್ಪನಾ ಸ್ವೀಟ್ಸ್‌ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಕೆಲವು ತಿಂಗಳಿನಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದ ರಿಂದ ಸಮಾಜ ಘಾತುಕರಿಗೆ ಅನುಕೂಲ ಆಗುತ್ತಿದೆ ಎಂದು ಮತ್ತೊಬ್ಬರು ದೂರು ಹೇಳಿದರು.

ಜೋಕಟ್ಟೆ– ಮಂಗಳಾದೇವಿ ಮಾರ್ಗದ ಬಸ್‌ಗಳು ಕೆಲವು ಟ್ರಿಪ್‌ ಓಡದೇ ಇರುವುದು, ಮಾರ್ಗ ಸಂಖ್ಯೆ 18ರ ಬಸ್‌ ಸಮಯ ಪಾಲನೆ ಮಾಡದಿರುವುದು, ಕೆಲವು ವಾಹನ ಗಳಲ್ಲಿ ಇನ್ನೂ ಟಿಂಟ್‌ ಗಾಜು ಬಳಸು ತ್ತಿರುವುದು, ಬಿಜೈನ ಆನೆಗುಂಡಿ ರಸ್ತೆ ಯಲ್ಲಿ ಕೆಲವು ಬೈಕ್‌ ಸವಾರರು ಸೈಲೆನ್ಸರ್‌ ಕೊಳವೆ ತೆಗೆದು ಬೈಕ್‌ ಓಡಿಸುತ್ತಿರುವ ಕುರಿತು ದೂರುಗಳು ಬಂದವು.

ಮುಡಿಪುವಿನಿಂದ ಕೇರಳ ಕಡೆಗೆ ಕೆಂಪು ಕಲ್ಲುಗಳ ಕಳ್ಳಸಾಗಣೆ, ಕೋಟೆ ಕಾರ್‌ ಬೀರಿಯಲ್ಲಿ ಆಟೊ ರಿಕ್ಷಾಗಳ ನಿಲುಗಡೆ ಸಮಸ್ಯೆ, ಕುಳಾಯಿಯಲ್ಲಿ ಕೊಳವೆ ಮಾರ್ಗವೊಂದನ್ನು ಅಗೆದು ಎರಡು ವಾರಗಳಾದರೂ ಮುಚ್ಚದೇ ಇರುವುದು, ಪಚ್ಚನಾಡಿ– ಪದವಿನಂಗಡಿ ಮನೆಯೊಂದರಲ್ಲಿ ನಡೆಯುತ್ತಿದೆ ಎನ್ನಲಾದ ವೇಶ್ಯಾವಾಟಿಕೆ ಚಟುವಟಿಕೆ ಕುರಿತು ಸಾರ್ವಜನಿಕರು ದೂರು ಹೇಳಿಕೊಂಡರು.

ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವೆಲೆಂಟೈನ್‌ ಡಿಸೋಜ, ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್, ಹೆಡ್‌ ಕಾನ್‌ಸ್ಟೆಬಲ್‌ ಪುರುಷೋತ್ತಮ ಫೋನ್‌ ಇನ್‌ ಕಾರ್ಯ ಕ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.