ADVERTISEMENT

ನಂದಿಕೂರು ದೇವರ ಕಾಡಿನಲ್ಲಿ ಮರಗಳ ಮಾರಣ ಹೋಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 8:55 IST
Last Updated 7 ಜುಲೈ 2017, 8:55 IST
ನಂದಿಕೂರು ಸುಜ್ಲಾನ್ ಪಕ್ಕದ ಕಾಡಿನಲ್ಲಿ ಮರಗಳ ಮಾರಣ ಹೋಮ.                           (ಪಡುಬಿದ್ರಿ ಚಿತ್ರ)
ನಂದಿಕೂರು ಸುಜ್ಲಾನ್ ಪಕ್ಕದ ಕಾಡಿನಲ್ಲಿ ಮರಗಳ ಮಾರಣ ಹೋಮ. (ಪಡುಬಿದ್ರಿ ಚಿತ್ರ)   

ಪಡುಬಿದ್ರಿ: ಅಮೂಲ್ಯ ಅರಣ್ಯ ಸಂಪತ್ತು ಇರುವ ಪಲಿಮಾರು ಗ್ರಾಮದ ನಂದಿ ಕೂರಿನ ದೇವರ ಕಾಡು ವಿಶೇಷ ಆರ್ಥಿಕ ವಲಯ ವಿಸ್ತರಣೆ ಹೆಸರಿನಲ್ಲಿ ಬಲಿಯಾಗುತ್ತಿದೆ.
ನಂದಿಕೂರು ಆಸುಪಾಸಿನಲ್ಲಿ ಜನರ ವಿರೋಧದ ನಡುವೆಯೇ ತಲೆ ಎತ್ತಿದ ಯುಪಿಸಿಎಲ್, ಸುಜ್ಲಾನ್ ಇನ್ಫ್ರಾಸ್ಟ್ರಕ್ಚರ್ ಯೋಜನೆಗೆ ಈಗಾಗಲೇ ಸಾವಿರಾರು ಮರ ಹನನ ಮಾಡಲಾಗಿದೆ.

ಇದೀಗ ಇಲ್ಲಿನ ಇತಿಹಾಸ ಪ್ರಸಿದ್ಧ ದೇವರ ಕಾಡಿ ನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಒಂದು ಕಡೆಗೆ ಪರಿಸರದ ಹೆಸರಿನಲ್ಲಿ ವನಮಹೋತ್ಸವ ಆಚರಣೆ ಮಾಡ ಲಾಗುತ್ತಿದೆ. ಇನ್ನೊಂದು ಕಡೆಗೆ ಕೈಗಾರಿಕೆ ಹೆಸರಿನಲ್ಲಿ ಕಾಡುಗಳಲ್ಲಿನ ಮರಗಳನ್ನು ಕಡಿಯಲಾಗುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಸುಜ್ಲಾನ್ ಯೋಜನೆ ಆರಂಭದ ದಿನದಲ್ಲಿಯೇ ನಂದಿಕೂರಿನ ದೇವರ ಕಾಡನ್ನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿತ್ತು. ಸ್ಥಳೀಯರು ಹಾಗೂ ಪರಿಸರ ಆಸಕ್ತರ ಹೋರಾಟದ ಫಲವಾಗಿ ಉಳಿದುಕೊಂಡಿತ್ತು. ಭೂ ಸ್ವಾಧೀನವನ್ನು ಪ್ರಶ್ನಿಸಿ ನಂದಿಕೂರು ಜನಜಾಗೃತಿ ಸಮಿತಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ADVERTISEMENT

ಅರ್ಜಿದಾರರ ವಾದ ಪುರಸ್ಕರಿಸಿದ ನ್ಯಾಯಾಲಯ ನಾಲ್ಕು ವರ್ಷಗಳ ಕಾಲ ಭೂಸ್ವಾಧೀನಕ್ಕೆ ತಡೆ ಯಾಜ್ಞೆ ನೀಡಿತ್ತು. ದೇವರ ಕಾಡು ಎಂಬ ಬಗ್ಗೆ ಸರಿಯಾದ ದಾಖಲೆ ಇಲ್ಲದೇ ಇರುವ ಕಾರಣ ನೀಡಿ ಅರ್ಜಿ ವಜಾಗೊ ಳಿಸಿದ ಪರಿಣಾಮ ಈಗ ಪ್ರದೇಶದ ಕಾಡನ್ನು ಕಡಿದು ನೆಲಸಮ ಮಾಡ ಲಾಗುತ್ತಿದೆ.

115 ಎಕರೆ ಪ್ರದೇಶ ವಿಸ್ತೀರ್ಣದ ಈ ಕಾಡಿನಲ್ಲಿ ಸುಗಂಧ ಭರಿತ ಮರಗಳ ಜತೆಗೆ ಔಷಧದ ಮರಗಳಿತ್ತು. ಇಲ್ಲಿ ಸುಮಾರು 7 ಕಟ್ಟೆಗಳಿದ್ದು, ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪ್ರಸಾದ ತಂದು ಕಟ್ಟೆಗಳಿಗೆ ಪೂಜೆ ಸಲ್ಲಿಸಿ ಈ ಭಾಗದ  ಕೃಷಿಕರು ಮರಗಳ ಸೊಪ್ಪು ಕಟಾವು ಮಾಡುತ್ತಿದ್ದರು.

ನಂದಿಕೂರು ಜನಜಾಗೃತಿ ಸಮಿತಿ ಕಾರ್ಯದರ್ಶಿ ಜಯಂತ್ ಕುಮಾರ್ ಮಾತನಾಡಿ, ‘2010 ರಲ್ಲಿ ದೇವರ ಕಾಡನ್ನು ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ನಂದಿಕೂರು ಜನಜಾಗೃತಿ ಸಮಿತಿ ಚೆನ್ನೈನ ಹಸಿರು ಪೀಠದಲ್ಲಿ ದಾವೆ ಹೂಡಿತ್ತು. ಆದರೆ, ಅರಣ್ಯ ಇಲಾಖೆ ಮತ್ತು ಸಂಬಂಧಿಸಿದ ಇತರೆ ಇಲಾಖೆ ಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಈ ಭಾಗದ ಜನರಿಗೆ ದ್ರೋಹ ಮಾಡಿದೆ. ಯುಪಿಸಿಎಲ್ ಸ್ಥಾಪ ನೆಯಿಂದ ಈ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚಳವಾದರೂ ಕಾಡಿನಿಂದಾಗಿ ಪರಿಸರ  ಸಮತೋಲನ ಕಾಪಾಡಲು ಸಹಕಾರಿ’ ಆಗಿದೆ ಎಂದು ಹೇಳಿದರು.

* *

ಸರ್ಕಾರ ಪರಿಸರ ರಕ್ಷಣೆ ನಮ್ಮ ಹೊಣೆ ಎನ್ನುತ್ತಾ ಪ್ರತಿವರ್ಷ ವನಮಹೋತ್ಸವ ಆಚರಣೆ ಮಾಡುತ್ತಿದೆ. ಉದ್ದಿಮೆಗಳ ಸ್ಥಾಪನೆಗೆ ಅರಣ್ಯ ನಾಶ ಮಾಡಲಾಗುತ್ತಿದೆ.
ದಿನೇಶ್ ಕೋಟ್ಯಾನ್
ತಾಲ್ಲೂಕು ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.