ADVERTISEMENT

ಪಿಂಕ್' ಬದಲಿಗೆ ಹಲವು ಬಣ್ಣ; ಎಥ್ನಿಕ್ ಕೇಂದ್ರಕ್ಕೆ ತಟ್ಟಿತಡಿಕೆ

ಪುತ್ತೂರಿನ ವಿಶೇಷ ಮತಗಟ್ಟೆಗಳ ಅವಾಂತರ

​ಪ್ರಜಾವಾಣಿ ವಾರ್ತೆ
Published 13 ಮೇ 2018, 7:05 IST
Last Updated 13 ಮೇ 2018, 7:05 IST

ಪುತ್ತೂರು: ಚುನಾವಣಾ ಆಯೋಗವು ವಿಶೇಷವಾಗಿ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಯನ್ನು ಸೆಳೆಯುವ ಸಲುವಾಗಿ ಸ್ಥಾಪಿಸಿದ್ದ ಹೊಸ ಚಿಂತನೆಯ ‘ಪಿಂಕ್’ ಹಾಗೂ ‘ಎಥ್ನಿಕ್’ ಮತಗಟ್ಟೆಗಳು ಪುತ್ತೂರಿನಲ್ಲಿ ‘ನಾಮ್‌ ಕೆ ವಾಸ್ತೇ’ ಅವಾಂತರದ ಕೇಂದ್ರಗಳಾಗಿ ಕಾಣಿಸಿವೆ.

ಪುತ್ತೂರು ಕ್ಷೇತ್ರದ ಕೋಡಿಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣ‌ವಾದ ಪಿಂಕ್ ಮತಗಟ್ಟೆ ಹೊರನೋಟಕ್ಕೆ ಅಲಂಕಾ ರಗೊಂಡಿದ್ದರೂ ಇಲ್ಲಿ ಪಿಂಕ್ ಬಣ್ಣವನ್ನೇ ಬಳಕೆ ಮಾಡಬೇಕು ಎಂಬ ಸೂಚನೆಗೆ ಬದಲಾಗಿ ಕೇಸರಿ ಸೇರಿದಂತೆ ವಿವಿಧ ಬಣ್ಣಗಳ ತಾಣವಾಗಿ ಕಂಡು ಬಂತು.

ಮತದಾರರಿಗೆ ಬಂದು ವಿಶ್ರಮಿಸಿಕೊಳ್ಳಲು ಶಾಮಿಯಾನ ಬಳಕೆ ಮಾಡಲಾಗಿತ್ತು. ಆಸನಗಳಿಗೆ ಬಿಳಿ ಬಣ್ಣದ ಬಟ್ಟೆಯನ್ನು ಹೊದಿಸಲಾಗಿತ್ತು. ಮತದಾನ ಕೇಂದ್ರದ ಒಳಗೆ ಮಹಿಳಾ ಸಿಬ್ಬಂದಿ ಪಿಂಕ್ ಬಣ್ಣದ ಬಟ್ಟೆ ಧರಿಸಿದ್ದರೂ ಇಲ್ಲಿ ಅಲಂಕರಿಸಲಾಗಿದ್ದ ಸೀರೆಗಳು ಪಿಂಕ್ ಬದಲಿಗೆ ಕೇಸರಿ ಹಾಗೂ ಇತರ ಬಣ್ಣಗಳೇ ಎದ್ದು ಕಾಣುತ್ತಿದ್ದವು. ಪಿಂಕ್ ಮತಗಟ್ಟೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಆಯೋಗದ ಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ವೈಫಲ್ಯ ಕಂಡುಬರುತ್ತಿತ್ತು.

ADVERTISEMENT

ಜನರಿಗೊಂದು ಪಿಆರ್‌ಒ ಪತಿಗೊಂದು 'ನ್ಯಾಯ'...!

ಪಿಂಕ್ ಮತಗಟ್ಟೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ ಕೂಡಾ ಮಹಿಳೆಯೇ ಆಗಿದ್ದರು. ಆದರೆ ಕಾನೂನು ಪಾಲನೆ ಬಗ್ಗೆ ತೀವ್ರವಾಗಿ ಮಾತನಾಡಿದ ಅವರು ಈ ಕೇಂದ್ರದ 100 ಮೀಟರ್‌ ಸುತ್ತಳತೆಯಲ್ಲಿ ಯಾವುದೇ ವಾಹನ ನಿಲ್ಲಬಾರದು. ಯಾರೂ ಫೋಟೊ ವಿಡಿಯೊ ತೆಗೆಯಬಾರದು ಎಂದರು.

ಆಗ ಪತ್ರಕರ್ತರು ಚುನಾವಣಾ ಅಧಿಕಾರಿಯವರೇ ಮತದಾನ ಕೇಂದ್ರ ದ ಹೊರಭಾಗದಿಂದ ಫೋಟೊ ತೆಗೆಯಬಹುದು ಎಂದಿದ್ದಾರೆ ಎಂದಾಗ ಅದೇ ಅಧಿಕಾರಿಯವರೇ ನಮಗೂ ಹೇಳಿದ್ದಾರೆ. 2 ದಿನ ನಮ್ಮ ತಲೆ ಕೊರೆದಿದ್ದಾರೆ ಎಂದು ಬಿಟ್ಟರು. ಆದರೆ ಅವರ ಪತಿಯ ಕಾರು ಮಾತ್ರ ಮತಗಟ್ಟೆಯ ಅಂಗಳದಲ್ಲಿ ನಿಂತಿತ್ತು. ಕಾನೂನು ಪಾಲಿಸುವವರು ಪತಿಯ ಕಾರನ್ನು ಮಾತ್ರ ಇಲ್ಲಿ ನಿಲ್ಲಿಸಲು ಅವಕಾಶ ಕೊಟ್ಟದ್ದು ಹೇಗೆ ಎಂಬುದಕ್ಕೆ ಚುನಾವಣಾ ಅಧಿಕಾರಿಗಳೇ ಉತ್ತರಿಸ ಬೇಕಾಗಿದೆ.

ಬಲ್ನಾಡು 'ಎಥ್ನಿಕ್' ಅಲ್ಲ 'ತಟ್ಟಿ' ಕೇಂದ್ರ

ಬಲ್ನಾಡಿನ ಉಜಿರುಪಾದೆ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಮತದಾನದತ್ತ ಆಕರ್ಷಿಸಲು ಎಥ್ನಿಕ್ ಮತಗಟ್ಟೆ ನಿರ್ಮಾಣ ಮಾಡಲಾಗಿತ್ತು. ಸಾಂಪ್ರದಾ ಯಿಕ ಹಾಗೂ ಜನಪದ ವೈವಿಧ್ಯತೆಗಳ ಮೂಲಕ ಈ ಮತಗಟ್ಟೆಯನ್ನು ಸಿಂಗಾರ ಮಾಡಬೇಕಿತ್ತು. ಆದರೆ ರೂ 100 ವೆಚ್ಚ ಮಾಡಿ ಎರಡು ತಟ್ಟಿಗಳನ್ನು ಕಟ್ಟಿರುವುದನ್ನು ಬಿಟ್ಟರೆ ಇಲ್ಲಿ ಯಾವುದೇ ವಿಶೇಷತೆ ಇರಲಿಲ್ಲ. ಬೆಂಗಳೂರಿನ ಮಂದಿಗೆ ಈ ಟೆಂಡರ್ ಸಿಕ್ಕಿದ್ದು, ಸ್ಥಳೀಯವಾಗಿ ಈ ಮತಗಟ್ಟೆಯನ್ನು ಸಿಂಗರಿಸಲು ಜನತೆ ಬೇಕಾದಷ್ಟು ವಿವಿಧ ಬಗೆಯ ಸಾಂಪ್ರದಾಯಿಕ ವಸ್ತುಗಳನ್ನು ತಂದಿಟ್ಟಿದ್ದರೂ ಇದ್ಯಾವುದನ್ನೂ ಬಳಕೆ ಮಾಡದೆ ಕೇವಲ 'ತಟ್ಟಿ' ಕಟ್ಟಿ ಎಥ್ನಿಕ್ ಬದಲಿಗೆ ‘ತಟ್ಟಿ’ ಕೇಂದ್ರವನ್ನಾಗಿಸುವಲ್ಲಿ ಈ ಟೆಂಡರ್ ಪಡೆದವರು ಯಶಸ್ವಿಯಾಗಿದ್ದಾರೆ.

ಸುಳ್ಯ: ಕೈ ಕೊಟ್ಟ ಮತ ಯಂತ್ರ, ವಿದ್ಯುತ್

ಸುಳ್ಯ: ತಾಲ್ಲೂಕಿನ ಬಾಳಿಲ, ಶಾಂತಿನಗರ ಮತ್ತು ಶೇಣಿ ಮತಗಟ್ಟೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ಸ್ವಲ್ಪ ಸಮಯ ಮತ ಚಲಾವಣೆಗೆ ತೊಡಕು ಉಂಟಾಗಿತ್ತು. ಅಧಿಕಾರಿಗಳು ಸರಿಪಡಿಸಿದರು.

ಶುಕ್ರವಾರ ರಾತ್ರಿ ತಾಲ್ಲೂಕಿನಾದ್ಯಂತ ಸುರಿದ ಗಾಳಿ ಮಳೆಗೆ ವಿವಿಧ ಬೂತ್‌ಗಳಲ್ಲಿ ವಿದ್ಯುತ್ ಕೈ ಕೊಟ್ಟಿತ್ತು. ಗುತ್ತಿಗಾರಿನ ಮೊಗ್ರ ಬೂತ್‌ನಲ್ಲಿ ಬೆಳಿಗ್ಗೆ ವಿದ್ಯುತ್ ಕಡಿತಗೊಂಡ ಪರಿಣಾಮ ಅಧಿಕಾರಿಗಳು ಕ್ಯಾಂಡಲ್ ಸಹಾಯ ದಿಂದ ಮತಯಂತ್ರ ಜೋಡಿಸಿ ದರು.

ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಮಾತ್ರ ಬೂತ್‌ಗಳಲ್ಲಿ ಇದ್ದರು. ಜೆಡಿಎಸ್-ಬಿಎಸ್‌ಪಿ, ಪಕ್ಷೇತ ರರು ಮತಗಟ್ಟೆ ಸಮೀಪ ಇರಲಿಲ್ಲ. ಕಳಂಜದಲ್ಲಿ ಮತಗಟ್ಟೆ ನಿಗದಿತ ದೂರದಿಂದ ಹತ್ತಿರ ಇದ್ದ ಕ್ಯಾಂಟೀನ್‌ನ್ನು ಮತ್ತು ಸುಳ್ಯ ಪಟ್ಟಣದ ತಾಲ್ಲೂಕು ಪಂಚಾಯತಿ ಮತಗಟ್ಟೆ ಬಳಿ ಇದ್ದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಸುಳ್ಯದ ವಿವಿಧ ಮತಗಟ್ಟೆಗೆ ತೆರಳಿ ಕಾರ್ಯಕರ್ತರಿಗೆ ಬೆಂಬಲ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.