ADVERTISEMENT

ಪೆರ್ನೆ-ಕಳೆಂಜ ರಸ್ತೆ ಅಭಿವೃದ್ಧಿಗೆ ₹1.50 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 8:48 IST
Last Updated 16 ಅಕ್ಟೋಬರ್ 2017, 8:48 IST

ಉಪ್ಪಿನಂಗಡಿ: ಪೆರ್ನೆ-ಮಲ್ಲಡ್ಕ-ಬಿಳಿ ಯೂರು-ಕಳೆಂಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಠ ಜಾತಿ, ಪಂಗಡದ 47 ಜನರಿಗೆ ಉಚಿತ ಅಡುಗೆ ಅನಿಲ ವಿತರಣಾ ಸಮಾ ರಂಭ ಶನಿವಾರ ಪೆರ್ನೆಯಲ್ಲಿ ಜರಗಿತು

ಶಾಸಕಿ ಶಕುಂತಳಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಪೆರ್ನೆಯಿಂದ ಕಳೆಂಜ ವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕಿಸುವ ಈ ರಸ್ತೆಗೆ ₹1. 50 ಕೋಟಿ ರೂಪಾಯಿ ಮಂಜೂರು ಆಗಿದ್ದು, ಈ ಮೂಲಕ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ’ ಎಂದರು.

ಇಲ್ಲಿನ ಈ ರಸ್ತೆ ಜಿಲ್ಲಾ ರಸ್ತೆಯಾಗಿರುತ್ತದೆ, ಆದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವರ ಮೂಲಕ ಲೋಕೋಪಯೋಗಿ ಇಲಾಖೆಯಿಂದ ಪ್ರಥಮ ಬಾರಿಗೆ ಜಿಲ್ಲಾ ರಸ್ತೆಗೆ ವಿಶೇಷ ಅನುದಾನ ದೊರೆತಿದ್ದು, ಈ ರಸ್ತೆ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ 12 ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಮಾರ್ಪಾಡು ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ ಎಂದರು.

ADVERTISEMENT

ಅರಣ್ಯ ಇಲಾಖೆ ವತಿಯಿಂದ ಇದೀಗ ಪರಿಶಿಷ್ಠ ಜಾತಿ, ಪಂಗಡದ 47 ಜನರಿಗೆ ಉಚಿತ ಅಡುಗೆ ಅನಿಲ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು, 2 ವರ್ಷದ ಹಿಂದೆ ಹೊಗೆ ಮುಕ್ತ ಪರಿಸರ ನಿರ್ಮಾಣ ಮಾಡಬೇಕು ಜತೆಗೆ ಕಾಡು ರಕ್ಷಣೆಯ ಉದ್ದೇಶದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದ್ದು, ಇಲ್ಲಿ ಸಿಗುವ ಸಿಲಿಂಡರ್ ಮತ್ತು ಸ್ಟೌವ್ ಸಂಪೂರ್ಣ ಉಚಿತವಾಗಿರುತ್ತದೆ, ಲಾನುಭವಿಗಳು ಜಾಗೃತೆ ವಹಿಸಿಕೊಂಡು ಇದರ ಪ್ರಯೋಜನ ಪಡೆಯಬೇಕು ಎಂದರು.

ರಾಜೀವ ಗಾಂಧಿ ವಿಶ್ವವಿದ್ಯಾಲಯದ ಸದಸ್ಯ ಡಾ. ರಘು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯದ ಮೂಲಕ ರಾಜ್ಯದಲ್ಲಿ 4 ಕೋಟಿ ಮಂದಿ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದ ಅವರು ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ತಿಳಿಸಿರುವ ಶೇ 95ರಷ್ಟು ಭರವಸೆಗಳು ಈಡೇರಿದ್ದು, ಸುಳ್ಯ ಕ್ಷೇತ್ರಕ್ಕೂ ನಮ್ಮ ಕೋರಿಕೆ ಮೇರೆಗೆ ವಿಶೇಷ ಅನುದಾನದ ಮೂಲಕ ಹಲವು ಅಭಿವೃದ್ಧಿ ಕೆಲಸಗಳು ಆಗಿದೆ ಎಂದರು.

ಪುತ್ತೂರು ನಗರ ಪ್ರಾಧಿಕಾರ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿದರು. ಪೆರ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಪೆರ್ನೆ ಸಿ.ಎ. ಬೇಂಕ್ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಕಳೆಂಜ ವಿಷ್ಣುಮೂರ್ತಿ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದಪ್ಪ ಪೂಜಾರಿ, ಪಿಡಬ್ಲ್ಯುಡಿ ಗುತ್ತಿಗೆದಾರ ವಸಂತ ಮಜಲು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ಲ ಶಾಫಿ, ಸಿ.ಎ. ಬೇಂಕ್ ನಿರ್ದೇಶಕ ಎಸ್. ಗೋಪಾಲ ಶೆಟ್ಟಿ ಇದ್ದರು. ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಸ್ವಾಗತಿಸಿ, ಲೋಕೋಪಯೋಗಿ ಇಂಜಿನಿಯರ್ ಪ್ರೀತಂ ವಂದಿಸಿದರು. ಉಮಾನಾಥ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.