ADVERTISEMENT

ಬಡತನ ರೇಖೆ ನಿರ್ಣಯ ಉದಾರಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 10:00 IST
Last Updated 20 ಫೆಬ್ರುವರಿ 2012, 10:00 IST

ಕಾಸರಗೋಡು: ಬಡತನ ರೇಖೆಯ ನಿರ್ಣಯವನ್ನು ಮತ್ತಷ್ಟು ಉದಾರಗೊಳಿಸಬೇಕು ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.

ಜನಸಂಪರ್ಕ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ  ನಡೆದ ಜಿಲ್ಲಾ ಮಟ್ಟದ ಅವಲೋಕನಾ ಸಭೆಯಲ್ಲಿ ಅವರು ಮಾತನಾಡಿದರು. 

ಕೇಂದ್ರ ಯೋಜನಾ ಆಯೋಗದ ಎಪಿಎಲ್, ಬಿಪಿಎಲ್ ವಿಭಜನೆ  ಕ್ರಮದಲ್ಲಿ ಕೇರಳ ಸರ್ಕಾರಕ್ಕೆ ತೃಪ್ತಿಯಿಲ್ಲ. ಅರ್ಹತೆಯಿರುವ ಗರಿಷ್ಠ ಮಂದಿಯನ್ನು ಬಿ.ಪಿ.ಎಲ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ ಎಂದವರು ತಿಳಿಸಿದರು.

ನಿರುದ್ಯೋಗ ವೇತನ ಪಡೆಯುವವರನ್ನು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಉತ್ಪಾದನಾ ವಲಯದ ಕಾರ್ಮಿಕರೊಂದಿಗೆ ಸೇರಿ ದುಡಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮನೆಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳು ನಂಬರ್ ನೀಡುವಲ್ಲಿ ವಿಳಂಬ ನೀತಿ ಅನುಸರಿಸುವುದನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಣ್ಣ ಮನೆಗಳಿಗೆ ಶೀಘ್ರದಲ್ಲಿ ನಂಬರ್ ನೀಡಲು ಸರ್ಕಾರ ಆದೇಶ ಹೊರಡಿಸಲಿದೆ. ರೇಷನ್ ಕಾರ್ಡು, ಗುರುತು ಚೀಟಿ, ಜಲ-ವಿದ್ಯುತ್ ಸಂಪರ್ಕ ಇತ್ಯಾದಿಗಳನ್ನು ಬಡವರಿಗೆ ತ್ವರಿತವಾಗಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಪ್ರಕಟಿಸಿದರು.

ಕೃಷಿ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ದಂಡ-ಬಡ್ಡಿಯನ್ನು ಕೈಬಿಡಲು ಬ್ಯಾಂಕುಗಳು ಕ್ರಮ ಕೈಗೊಳ್ಳಬೇಕು ಎಂದವರು ಮನವಿ ಮಾಡಿದರು. ಜನಸಂಪರ್ಕ ಕಾರ್ಯಕ್ರಮದಲ್ಲಿ ಲಭಿಸಿದ ಅರ್ಜಿಗಳು ಮತ್ತು ಪರಿಹಾರ ಕಾರ್ಯಗಳ ಕುರಿತು ಜಿಲ್ಲಾಧಿಕಾರಿ ವಿ.ಎನ್.ಜಿತೇಂದ್ರನ್ ವಿವರಿಸಿದರು. 22,046 ದೂರುಗಳಲ್ಲಿ 12,949 ಪರಿಹರಿಸಲಾಯಿತು.

ಜನಸಂಪರ್ಕ ಕಾರ್ಯಕ್ರಮದಲ್ಲಿ ಲಭಿಸಿದ ದೂರುಗಳಿಗೆ ಸಂಬಂಧಿಸಿ ಆಯಾ ಇಲಾಖೆಗಳು ಕೈಗೊಂಡ ಪರಿಹಾರೋಪಾಯಗಳನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಎಡಿಎಂ ಎಚ್.ದಿನೇಶನ್, ಉಪಜಿಲ್ಲಾಧಿಕಾರಿ ಪಿ.ಬಾಲಕಿರಣ್, ಹಣಕಾಸು ಅಧಿಕಾರಿ ಇ.ಪಿ.ರಾಜ್‌ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.