ಮೂಲ್ಕಿ: ನರೇಂದ್ರ ಮೋದಿ ದೇಶದಲ್ಲಿ ನೀಡುತ್ತಿರುವ ಆಡಳಿತವೂ ಜಗತ್ತಿನಲ್ಲಿಯೇ ಮಾದರಿ ಆಗಿದ್ದು, ಅದನ್ನು ಮೆಚ್ಚಿಕೊಂಡಿದ್ದಾರೆ. ರಾಜ್ಯದಲ್ಲಿ ಸುಭಿಕ್ಷೆ ತರಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಕಮಲ ಅರಳಲ ಅರಳುವಂತೆ ಮಾಡುವ ಜವಾಬ್ದಾರಿ ಈ ಕ್ಷೇತ್ರದ ಜನರ ಮೇಲಿದೆ ಎಂದು ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಚೌಹಾಣ್ ಹೇಳಿದರು.
ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ವೃತ್ತದಲ್ಲಿ ಗುರುವಾರ ಬಿಜೆಪಿ ಅಭ್ಯ್ರರ್ಥಿ ಉಮಾನಾಥ ಕೋಟ್ಯಾನ್ ಪರವಾಗಿ ಬೃಹತ್ ರೋಡ್ ಷೊ ನಡೆಸಿ ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ರಾಜ್ಯದಲ್ಲಿನ ಭ್ರಷ್ಟ ಆಡಳಿತವನ್ನು ತೊಲಗಿಸಿ ಬಿಜೆಪಿ ಅಧಿಕಾ
ರಕ್ಕೆ ತರುವ ಸಂಕಲ್ಪವನ್ನು ಕಾರ್ಯಕರ್ತರು ಉಳಿದ ಎರಡು ದಿನದಲ್ಲಿ ಮಾಡಬೇಕು ಎಂದರು.
ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಾತನಾಡಿ, ನಾನು ನಿಮ್ಮ ಸೇವಕ, ನನಗೆ ಅಧಿಕಾರ ಕೊಡಿ ಆನಂತರ ಅಭಿವೃದ್ಧಿಯನ್ನು ಹೇಗೆ ಮಾಡುವೆ ಎಂದು ನೋಡಿ ಎಂದರು.
ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು, ನಾಯಕರಾದ ಬಾಲಕೃಷ್ಣ ಭಟ್, ಕೆ.ಆರ್.ಪಂಡಿತ್, ದೇವಪ್ರಸಾದ ಪುನರೂರು, ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ, ಸುದರ್ಶನ್, ಸುಚರಿತ ಶೆಟ್ಟಿ, ಕಸ್ತೂರಿ ಪಂಜ, ಬ್ರಜೇಶ್ ಚೌಟ ಇದ್ದರು.
ಕಾಂಗ್ರೆಸ್ನಿಂದ ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ, ಅಶೋಕ್ ಬಿಜೆಪಿಗೆ ಸೇರ್ಪಡೆಗೊಂಡರು. ಕಾರ್ಯಕ್ರಮಕ್ಕೆ ಮುನ್ನ ಹಳೆಯಂಗಡಿಯಲ್ಲಿ ಜಾರಂದಾಯ ದೈವಸ್ಥಾನದಿಂದ ಹಳೆಯಂಗಡಿ ಮುಖ್ಯ ಪೇಟೆಯವರೆಗೆ ರೋಡ್ ಷೊ ನಡೆಸಲಾಯಿತು.
ರೋಡ್ ಷೊನಿಂದ ಸಂಚಾರ ಅಸ್ತವ್ಯಸ್ತ: ಮೂರುಕಾವೇರಿಯಿಂದ ಕಿನ್ನಿಗೋಳಿ ಮುಖ್ಯಪೇಟೆಯವರೆಗೆ ನಡೆದ ಸುಮಾರು 2 ಗಂಟೆಯ ರೋಡ್ ಷೊನಲ್ಲಿ ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಯಿತು. ಗುರುವಾರ ವಾರದ ಸಂತೆ ಇದ್ದ ಪರಿಣಾಮ ವ್ಯಾಪಾರಿಗಳು ಪರದಾಡಿದರು.
ವ್ಯಾಪಾರಿಗಳಿಂದ ಆಕ್ರೋಶ
ವಾರದ ಸಂತೆಗಾಗಿ ವ್ಯಾಪಾರ ಮಾಡಲು ಬಂದಿದ್ದೇವೆ, ಆದರೆ, ವ್ಯಾಪಾರ ಆಗುವ ಸಂಜೆ ಸಮಯದಲ್ಲಿಯೇ ಮೆರವಣಿಗೆ ಮಾಡಿ ಸಭೆ ಮಾಡಿದ್ದಾರೆ. ಇದರಿಂದ ನಷ್ಟವಾಗಿದೆ. ಗ್ರಾಹಕರು ಬರುವಾಗ ಬಸ್ಗಳು ಬಾರದೇ ಇದ್ದುದರಿಂದ ಈ ರೀತಿ ಆಗಿದೆ. ಇವರಿಗೆ ಸಭೆ ಮಾಡಬೇಕಿದ್ದರೆ ಯಾವುದಾದರೂ ಮೈದಾನದಲ್ಲಿ ಮಾಡಲು ಅನುಮತಿ ಕೊಡಬೇಕಿತ್ತು. ಸಾರ್ವಜನಿಕರಿಗೆ ತೊಂದರೆ ಕೊಟ್ಟವರನ್ನು ಚುನಾಯಿಸುವುದು ಹೇಗೆ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.