ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ಹದಗೆಟ್ಟ ಹೊಂಡಮಯ ಸರ್ವೀಸ್ ರಸ್ತೆ ಬಗ್ಗೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಲ್ಲಿನ ಸಾಮಾಜಿಕ ಹೋರಾಟ ಸಮಿತಿ ಮತ್ತು ವಿವಿಧ ಮಾಧ್ಯಮಗಳ ಮೂಲಕ ಗಮನ ಸೆಳೆದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿ ಗಳು ಮಾತ್ರ ತೀರಾ ನಿರ್ಲಕ್ಷ್ಯ ಧೋರಣೆ ಅನುರಿಸುತ್ತಿದ್ದಾರೆ ಎಂದು ಟೆಂಪೊ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ ಆರೋಪಿಸಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ರಿಕ್ಷಾ ಚಾಲಕರು ಮತ್ತು ನಾಗರಿಕರು ಭಿಕ್ಷೆ ಬೇಡಿ ಸರ್ವೀಸ್ ರಸ್ತೆ ದುರಸ್ತಿಗೊಳಿಸುವ ಮೂಲಕ ಶನಿವಾರ ನಡೆಸಿದ ವಿನೂತನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಎರಡು ವರ್ಷಗಳಿಂದ ಸರ್ವೀಸ್ ರಸ್ತೆಯ ಎರಡೂ ಬದಿ ಚರಂಡಿ ನೆಪದಲ್ಲಿ ಅಗೆದು ಹಾಕಲಾಗಿದ್ದು, ವಿದ್ಯಾರ್ಥಿಗಳು ಮತ್ತು ವೃದ್ಧರು ಕುಸಿದು ಬೀಳುತ್ತಿದ್ದಾರೆ. ಇಲ್ಲಿನ ಹೊಂಡಮಯ ಸರ್ವೀಸ್ ರಸ್ತೆಯಲ್ಲಿ ಕೃತಕ ಕೆರೆ ಮಾದರಿಯಲ್ಲಿ ಸಂಗ್ರಹಗೊಂಡ ಕೆಸರು ನೀರಿನಿಂದ ಹಲವಾರು ವಾಹನಗಳು ಹೊಂಡಕ್ಕೆ ಸಿಲುಕಿ ವಾಹನ ಬಿಡಿಭಾಗ ಕಳಚುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರನ್ನು ರಿಕ್ಷಾ ಮತ್ತು ಟೆಂಪೊ ಚಾಲಕರು ಭೇಟಿಯಾಗಿ ಮನವಿ ಸಲ್ಲಿಸಿದರು. ರಿಕ್ಷಾ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಕಾರ್ಯದರ್ಶಿ ಚಂದ್ರಶೇಖರ್, ನಾರಾ ಯಣ, ಗೌರವಾಧ್ಯಕ್ಷ ಸದಾನಂದ ನಾವೂರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.