ADVERTISEMENT

ಸರಳ್‌ ಪ್ಲಸ್ ಖಾತೆ: 5 ಲಕ್ಷದವರೆಗೆ ವಿಮೆ

ಕಾರ್ಪೊರೇಷನ್ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 12:50 IST
Last Updated 1 ಜೂನ್ 2013, 12:50 IST

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ ಬ್ಯಾಂಕ್ ಖಾತೆ ಮಾಡಿಸಿಕೊಳ್ಳಲು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ `ಸರಳ್ ಪ್ಲಸ್' ಎಂಬ ಹೊಸ ಉಳಿತಾಯ ಖಾತೆ ಯೋಜಯನ್ನು ಆರಂಭಿಸಿದ್ದು, ಈ ಯೋಜನೆಯಡಿಯಲ್ಲಿ ಖಾತೆ ತೆರೆದವರಿಗೆ 5 ಲಕ್ಷ ರೂಪಾಯಿ ವರೆಗೆ ಉಚಿತ ವಿಮಾ ಸೌಲಭ್ಯ ಇದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಹೇಳಿದ್ದಾರೆ.

ರಾಜಭಾಷಾ ನೀತಿಯ ಅನುಷ್ಠಾನದಲ್ಲಿ ಬ್ಯಾಂಕ್ ಮಾಡಿರುವ ಸಾಧನೆಗಳನ್ನು ತಿಳಿಸುವ ಸಲುವಾಗಿ ಶುಕ್ರವಾರ ಬ್ಯಾಂಕ್‌ನ ಇಲ್ಲಿನ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಸರಳ್ ಪ್ಲಸ್ ಯೋಜನೆಯಂತೆ ನಯಾ ಪೈಸೆ ಠೇವಣಿ ಇರಿಸದೆಯೂ ಖಾತೆ ತೆರೆಯಬಹುದು. 5 ಲಕ್ಷ ರೂಪಾಯಿವರೆಗೆ ವಿಮೆ ದೊರಕಿಸಿರುವುದು ಬಹಳ ದೊಡ್ಡ ಸಂಗತಿ. ಇಂತಹ ಕೊಡುಗೆಯನ್ನು ಇತರ ಬ್ಯಾಂಕ್‌ಗಳು ಗ್ರಾಹಕರಿಗೆ ನೀಡಿಲ್ಲ ಎಂದರು.

50 ಲಕ್ಷ ರೂಪಾಯಿವರೆಗಿನ ಮನೆ ಸಾಲಕ್ಕೆ ಶೇ 10.25ರಷ್ಟು ಬಡ್ಡಿ ಮತ್ತು 50 ಲಕ್ಷ ಮೇಲ್ಪಟ್ಟ ಸಾಲಕ್ಕೆ ಶೇ 10.50 ಬಡ್ಡಿ ನಿಗದಿಪಡಿಸಲಾಗಿದೆ. ಐಷಾರಾಮಿ ವಾಹನಗಳನ್ನು ಖರೀದಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು, ಅಂತಹ ಗ್ರಾಹಕರ ಅನುಕೂಲಕ್ಕಾಗಿ 10 ಲಕ್ಷಕ್ಕಿಂತ ಅಧಿಕ ಸಾಲದ ಮೇಲಿನ ಬಡ್ಡಿದರವನ್ನು ಶೇ 10.25ಕ್ಕೆ ನಿಗದಿಪಡಿಸಲಾಗಿದೆ. ವ್ಯಾಪಾರ ವಹಿವಾಟು ನಡೆಸುವವರಿಗೆ ನೀಡುವ ಸಾಲದ ಬಡ್ಡಿದರವನ್ನು ಶೇ 12.25ಕ್ಕೆ ನಿಗದಿಪಡಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ರಾಜಭಾಷಾ ಅನುಷ್ಠಾನದಲ್ಲಿ ಸಾಧನೆ: ಕಾರ್ಪೊರೇಷನ್ ಬ್ಯಾಂಕ್ ರಾಜಭಾಷಾ (ಹಿಂದಿ) ಅನುಷ್ಠಾನದಲ್ಲಿ ಅನೇಕ ಸಾಧನೆ ಮಾಡಿದೆ. ನಗರ ರಾಜಭಾಷಾ ಕಾರ್ಯಾನ್ವಯ ಸಮಿತಿಯ ಮಂಗಳೂರಿನ ಸಂಯೋಜಕನಾಗಿಯೂ ಬ್ಯಾಂಕ್ ಶ್ರಮಿಸುತ್ತಿದೆ. ತನ್ನ ಕಚೇರಿಯಲ್ಲಿ ಹಿಂದಿಗೆ ಮಾನ್ಯತೆ ಕೊಡುವುದರ ಜತೆಗೆ ಜನಸಾಮಾನ್ಯರನ್ನು ಹಿಂದಿ ಜತೆಗೆ ಜೋಡಿಸಲು ಅನೇಕ ಹೊಸ ಕಾರ್ಯಕ್ರಮಗಳನ್ನು ರೂಪಿಸಿದೆ.

ಇದಕ್ಕಾಗಿಯೇ ಕೇಂದ್ರ ಸರ್ಕಾರದ ಗೃಹ ಇಲಾಖೆಯ ರಾಜಭಾಷಾ ವಿಭಾಗವು ರಾಜಭಾಷಾ ವಿಶಿಷ್ಟ ಸನ್ಮಾನ ನೀಡಿ ಪುರಸ್ಕರಿಸಿದೆ ಎಂದು ಅವರು ಹೇಳಿದರು.

ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರ್‌ಲಾಲ್ ದೌಲ್ತಾನಿ, ಬಿ.ಕೆ.ೀವಾಸ್ತವ ಇತರರು ಇದ್ದರು.

ಮುಂಗಾರಿನ ಬಂಪರ್ ಕೊಡುಗೆ
ಮುಂಗಾರು ಅವಧಿಯಲ್ಲಿ ಗ್ರಾಹಕರನ್ನು ಕಾರ್ಪೊರೇಶನ್ ಬ್ಯಾಂಕ್‌ನತ್ತ ಸೆಳೆಯುವ ಉದ್ದೇಶದಿಂದ `ಮಾನ್ಸೂನ್ ಬಂಪರ್ ಆಫರ್' ಎಂಬ ನಾಲ್ಕು ತಿಂಗಳ ವಿಶೇಷ ಚಿಲ್ಲರೆ ಸಾಲ ನೀಡಿಕೆ ಅಭಿಯಾನವನ್ನು ಬ್ಯಾಂಕ್ ಕೈಗೊಂಡಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಈ ಅಭಿಯಾನ ನಡೆಯಲಿದೆ. ಕಾರ್ಪ್ ಹೋಂ, ಕಾರ್ಪ್ ವೆಹಿಕಲ್, ಕಾರ್ಪ್ ವ್ಯಾಪಾರ್, ಕಾರ್ಪ್ ಡಾಕ್ಟರ್ ಪ್ಲಸ್ ವಿಭಾಗಗಳಲ್ಲಿ ಈ ಸಾಲ ಯೋಜನೆಗಳಿದ್ದು, ಸಾಲದ ಸಂಸ್ಕರಣಾ ಶುಲ್ಕ ಮನ್ನ ಸಹಿತ ಹಲವಾರು ಕೊಡುಗೆಗಳಿವೆ. ಈ ಅಭಿಯಾನದ ಅವಧಿಯಲ್ಲಿ 4 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬ್ಯಾಂಕ್‌ನ ಮಹಾಪ್ರಬಂಧಕ ಕೆ.ಆರ್.ರಾಮಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT