ADVERTISEMENT

ಸುಳ್ಯ: ರಾಜ್ಯ ಮಟ್ಟದ ಜನಜಾಗೃತಿ ವೇದಿಕೆಗೆ 12ರಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 8:00 IST
Last Updated 3 ಅಕ್ಟೋಬರ್ 2012, 8:00 IST

ಸುಳ್ಯ: ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸುವಲ್ಲಿ ಶ್ರಮಿಸುತ್ತಿರುವ ಜನಜಾಗೃತಿ ವೇದಿಕೆಗಳು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆರಂಭವಾದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ  ಕಾರ್ಯನಿರ್ವಹಿಸುತ್ತಿದ್ದು, ಇದೇ 12ರಂದು ಬೆಂಗಳೂರಿನಲ್ಲಿ ರಾಜ್ಯ ಘಟಕದ ಉದ್ಘಾಟನೆ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಮಂಗಳವಾರ ಸುಳ್ಯದಲ್ಲಿ ನಡೆದ ನವಜೀವನ ಸಮಿತಿ ಸದಸ್ಯರ ಸಮಾವೇಶ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಕೇವಲ ಭಾರತದ ರಾಷ್ಟ್ರಪಿತ ಮಾತ್ರ ಅಲ್ಲ, ಇತರ ದೇಶಗಳೂ ಗಾಂಧೀಜಿಗೆ ಅಷ್ಟೇ ಗೌರವ ಕೊಡುತ್ತಿವೆ. 60-70 ವರ್ಷಗಳ ಹಿಂದೆ ಭಾರತ ಹಿಂದುಳಿದ ದೇಶವಾಗಿತ್ತು. ಆದರೆ ಈಗ ಸಾಕಷ್ಟು ಪ್ರಗತಿ ಸಾಧ್ಯವಾಗಿದೆ. ಸಾಕಷ್ಟು ಪರಿವರ್ತನೆಯಾಗಿದೆ. ಬಡತನ ಕಡಿಮೆಯಾಗಿದೆ. ಉದ್ಯೋಗಾವಕಾಶಗಳು ನಿರ್ಮಾಣವಾಗಿವೆ. ಬೇರೆ ಬೇರೆ ದೇಶಗಳಲ್ಲಿ ಉನ್ನತ ವೃತ್ತಿ ನಡೆಸುತ್ತಿರುವರು ಎಲ್ಲರೂ ಭಾರತೀಯರೇ ಆಗಿದ್ದಾರೆ. ಇತರ ದೇಶಗಳ ಭಾರತವನ್ನು ಅಸೂಯೆಯಿಂದ ನೋಡುವ ಸ್ಥಿತಿ ಇದೆ ಎಂದು ಹೆಗ್ಗಡೆ ಹೇಳಿದರು.

ದುಶ್ಚಟಗಳಿಗೂ ಸ್ವಾತಂತ್ರ್ಯ!: ಸ್ವಾತಂತ್ರ್ಯ ಬಂದ ನಂತರ ದುಶ್ಚಟಗಳಿಗೂ ಸ್ವಾತಂತ್ರ್ಯ ಬಂತು. ಸ್ವೇಚ್ಛಾಚಾರದ ಜೀವನಕ್ಕೆ ಜನರು ಬಲಿ ಬಿದ್ದರು. ಕೊಪ್ಪಳ ಜಿಲ್ಲೆಯಲ್ಲಿ ಬರಗಾಲವಿದ್ದರೂ ಮದ್ಯಕ್ಕೆ ಏನೂ ಬರವಿಲ್ಲ. ಚಟ ಎಂಬುದು ಅಷ್ಟು ಪ್ರಬಲವಾದದ್ದು, ಜನಜಾಗೃತಿ ವೇದಿಕೆಯವರು ನಿಷ್ಠೆಯಿಂದ ಕೆಲಸ ಮಾಡಿದ್ದರಿಂದ ಸಾಕಷ್ಟು ಪರಿವರ್ತನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಮದ್ಯಮುಕ್ತರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಸಾಮಾಜಿಕ ಬದುಕಿನಲ್ಲಿ ಕಟ್ಟ ಕಡೆಯ ವ್ಯಕ್ತಿ ಸ್ವಾಭಿಮಾನಿಯಾಗಿ, ಸ್ವಾವಲಂಬಿಯಾಗಿ ಬದುಕಬೇಕು ಎಂಬ ಗಾಂಧೀಜಿ ಕನಸನ್ನು ವೀರೇಂದ್ರ ಹೆಗ್ಗಡೆ ತಮ್ಮ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನನಸು ಮಾಡುತ್ತಿದ್ದಾರೆ ಎಂದರು.

ಶಾಸಕರಾದ ಎಸ್.ಅಂಗಾರ, ಬಿ.ರಮಾನಾಥ ರೈ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುಳಿಯ ಕೇಶವ ಭಟ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮತಿ ನಾರಾಯಣ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನಿನ ಉಪಾಧ್ಯಕ್ಷ ಡಾ.ಕೆ.ವಿ.ಚಿದಾನಂದ, ಚೆನ್ನಕೇಶವ ದೇವಸ್ಥಾನ ಆಡಳಿತ ಮೊಕ್ತೇಸರ ಡಾ.ಟಿ.ಹರಪ್ರಸಾದ್ ಅತಿಥಿಗಳಾಗಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ರಾಧಾಕೃಷ್ಣ, ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಮಾಜಿ ಅಧ್ಯಕ್ಷರುಗಳಾದ ಎನ್.ಎ.ರಾಮಚಂದ್ರ, ಪಿ.ಸಿ.ಜಯರಾಮ ವೇದಿಕೆಯಲ್ಲಿದ್ದರು.

ಶ್ರಾವ್ಯಾ, ರವಿರಾಜ್ ಪಂಜ, ಸಾವಿತ್ರಿ ಬೆಟ್ಟಂಪಾಡಿ, ಪೂರ್ಣಿಮಾ ಅನಿಸಿಕೆ ವ್ಯಕ್ತಪಡಿಸಿದರು. ಸಮಾರಂಭಕ್ಕೂ ಮುನ್ನ ಸಮಿತಿ ಸದಸ್ಯರಿಂದ ಮೆರವಣಿಗೆ ನಡೆಯಿತು. ಕೋಟಿ-ಚೆನ್ನಯ ಪಾತ್ರಧಾರಿಗಳ ಮಧ್ಯೆ ಮಹಾತ್ಮ ಗಾಂಧಿ ವೇಷ (ಶಿವಪ್ರಸಾದ್ ಅಡ್ಡನಪಾರೆ) ಗಮನ ಸೆಳೆಯಿತು. ಭವಾನಿಶಂಕರ ಅಡ್ತಲೆ ಸ್ವಾಗತಿಸಿದರು. ಸುಧಾ ಹಾಗೂ ಎಂ.ವೆಂಕಪ್ಪ ಗೌಡ ನಿರೂಪಿಸಿದರು.
 
`ಮನಪರಿವರ್ತನೆಯಿಂದ ಸಾಧ್ಯ~
ಗಾಂಧಿ ಜಯಂತಿ ದಿನ `ಮದ್ಯ~ದ ಅಂಗಡಿ ಬಂದ್, ಆ ಕಡೆ-ಈ ಕಡೆ ಅಂಗಡಿ ಅಂಗಡಿ ತೆರೆದಿರುತ್ತದೆ ಎಂದು ವಿಶ್ಲೇಷಿಸಿದ ರಮಾನಾಥ ರೈ, ಕಾನೂನಿನಿಂದ ಸಾಧ್ಯವಾಗದ್ದನ್ನು ಮನಪರಿವರ್ತನೆ ಮೂಲಕ ಸಾಧ್ಯ ಎಂದು ಯೋಜನೆ ಸಾಧಿಸಿ ತೋರಿಸಿದೆ ಎಂದರು.

ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಅಂಗವಿಕಲರ ಕಲ್ಯಾಣ ಕಾರ್ಯದ ಮೇಲ್ವಿಚಾರಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ನೀಡುವ ಕುರಿತು ಸಂಪುಟದಲ್ಲಿ ನಿರ್ಧಾರವಾಗಿದೆ ಎಂದು ಶಾಸಕ ಅಂಗಾರ ಪ್ರಕಟಿಸಿದರು.

ಗಾಂಧಿ ಜಯಂತಿ ದಿನ `ಮದ್ಯ~ದ ಅಂಗಡಿ ಬಂದ್, ಆ ಕಡೆ-ಈ ಕಡೆ ಅಂಗಡಿ ಅಂಗಡಿ ತೆರೆದಿರುತ್ತದೆ ಎಂದು ವಿಶ್ಲೇಷಿಸಿದ ರಮಾನಾಥ ರೈ, ಕಾನೂನಿನಿಂದ ಸಾಧ್ಯವಾಗದ್ದನ್ನು ಮನಪರಿವರ್ತನೆ ಮೂಲಕ ಸಾಧ್ಯ ಎಂದು ಯೋಜನೆ ಸಾಧಿಸಿ ತೋರಿಸಿದೆ ಎಂದರು.
ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಅಂಗವಿಕಲರ ಕಲ್ಯಾಣ ಕಾರ್ಯದ ಮೇಲ್ವಿಚಾರಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ನೀಡುವ ಕುರಿತು ಸಂಪುಟದಲ್ಲಿ ನಿರ್ಧಾರವಾಗಿದೆ ಎಂದು ಶಾಸಕ ಅಂಗಾರ ಪ್ರಕಟಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.