ADVERTISEMENT

ಸೋಲನ್ನೇ ಯಶಸ್ಸಿನ ಮೆಟ್ಟಿಲನ್ನಾಗಿಸಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:15 IST
Last Updated 8 ಅಕ್ಟೋಬರ್ 2011, 10:15 IST

ಸುರತ್ಕಲ್: `ಕ್ರೀಡಾಪಟುಗಳು ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಸಮಾನ ಮನಸ್ಕರಾಗಿ ಫಲಿತಾಂಶ  ಸ್ವೀಕರಿಸಬೇಕು. ಸೋಲಿನಿಂದ ಕಂಗೆಡದೇ ಯಶಸ್ಸಿನ ಮೆಟ್ಟಿಲನ್ನಾಗಿ ಪರಿವರ್ತಿಸಬೇಕು~ ಎಂದು ಕ್ರೀಡಾಪಟು ಭಾರತಿ ಜಗದೀಶ್ ಬೋಳೂರು ಕರೆ ನೀಡಿದರು.

ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಸುರತ್ಕಲ್ ಗೋವಿಂದದಾಸ ಕಾಲೇಜಿನ ಮೈದಾನದಲ್ಲಿ ಆರಂಭವಾದ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದಿ. ಪದ್ಮನಾಭ ಅಮೀನ್ ಗೋವಿಂದದಾಸ ಕಾಲೇಜಿನ ದೈಹಿಕ ನಿರ್ದೇಶಕರಾಗಿದ್ದಾಗ ರಾಜ್ಯ, ಅಂತರರಾಷ್ಟ್ರೀಯ ಕ್ರೀಡಾ ಪಟುಗಳನ್ನು ಬೆಳಕಿಗೆ ತಂದಿದ್ದರು ಎಂದು ಅಧ್ಯಕ್ಷತೆ ವಹಿಸಿದ್ದ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಪಿ.ರಂಜನ್ ರಾವ್ ಸ್ಮರಿಸಿದರು.

ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಕ್ರೀಡಾ ಜ್ಯೋತಿಯ ಮೆರವಣಿಗೆಗೆ ದೇವಳದ ಅನುವಂಶಿಕ ಅರ್ಚಕ ಐ.ರಮಾನಂದ ಭಟ್ ಚಾಲನೆ ನೀಡಿದರು. ಚೆಂಡೆ ವಾದನ, ಕೊಂಬು ಕಹಳೆ, ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಆಕರ್ಷಣೆ ನೀಡಿದವು. ಪದ್ಮನಾಭ ಅಮೀನ್ ಪತ್ನಿ ಜಯಂತಿ ಅಮೀನ್ ಕ್ರೀಡಾಕೂಟ  ಉದ್ಘಾಟಿಸಿದರು.

ಕ್ರೀಡೋತ್ಸವದ ಅಂಗವಾಗಿ ದ.ಕ. ಜಿಲ್ಲಾ ಮಟ್ಟದ ಅಂತರ್ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತ್ಲೆಟಿಕ್ ಕೂಟ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಗುಡ್ಡಗಆಡು ಓಟ, ಮಂಗಳೂರು ವಿ.ವಿ ಮಟ್ಟದ ಅಂತರ ಕಾಲೇಜು ಕಬಡ್ಡಿ ಟೂರ್ನಿ ಶನಿವಾರದವರೆಗೆ ನಡೆಯಲಿದೆ.

ನಿವೃತ್ತ ದೈಹಿಕ ನಿರ್ದೇಶಕ ದಾಮೋದರ ಶೆಟ್ಟಿ,ಅಮೃತಮಹೋತ್ಸವ ಸಮಿತಿಯ ಗೌರವಾಧ್ಯಕ್ಷ  ಮಹಾಬಲ ಪೂಜಾರಿ, ಪಾಲಿಕೆ ಸದಸ್ಯ ಅಶೋಕ್ ಶೆಟ್ಟಿ, ಕ್ರೀಡೋತ್ಸವ ಸಮಿತಿಯ ಮುಖ್ಯಸಂಚಾಲಕ ಎರ್ಮಾಳ್ ರೋಹಿತ್ ಕುಮಾರ್ ಹೆಗ್ಡೆ, ಸಂಚಾಲಕ ಸುಬ್ರಹ್ಮಣ್ಯ ಟಿ, ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬಿ.ಪುರುಷೋತ್ತಮ ಪೂಜಾರಿ, ಆಡಳಿತ ಸಂಘದ ಕಾರ್ಯದರ್ಶಿ ಗಿರಿಧರ ಹತ್ವಾರ್, ಪ್ರಾಂಶುಪಾಲ ಪ್ರೊ.ರಾಜ್‌ಮೋಹನ್ ರಾವ್, ಸುಜಾತಾ ಕೆ.ವಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಟಿ,ಎನ್., ಕೃಷ್ಣಮೂರ್ತಿ ಪಿ,,ದೇವಪ್ಪ ಕುಳಾಯಿ, ಕೆ.ಕೆ.ಪೇಜಾವರ, ದೈಹಿಕ ಶಿಕ್ಷಕ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.