ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಕುಮಾರ್ ಬಜಾಲ್ ಅವರು ಶುಕ್ರವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, ಗಾಂಜಾ ಡ್ರಗ್ಸ್ ಮಾದಕ ದ್ರವ್ಯ ಸಾಗಣೆ ಜಾಲದ ನಿರ್ಮೂಲನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಯಂ ಘೋಷಿತ ಆಸ್ತಿ ತೆರಿಗೆ ರದ್ದು ಮಾಡಲಾ ಗುವುದು. ತ್ಯಾಜ್ಯ ವಿಲೇವಾರಿ ತೆರಿಗೆ ರದ್ದು, ಸಮರ್ಪಕ ವ್ಯವಸ್ಥೆ, ಸ್ವಚ್ಛತೆಗೆ ಸಂಬಂಧಿಸಿ ವಾರ್ಡ್ ಕಮಿಟಿ ರಚನೆ, ಜೂಜು ಕೇಂದ್ರ ಅಕ್ರಮ ಸ್ಕಿಲ್ ಗೇಮ್, ವಿಡಿಯೊ ಗೇಮ್ಗಳ ಮೇಲೆ ಕ್ರಮ, ನೇತ್ರಾವತಿ ನದಿ ಮಾಲಿನ್ಯದ ವಿರುದ್ಧ ಕ್ರಮ, ನದಿಉಳಿಸಲು ಯೋಜನೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಶನ್ ಹಾವಳಿಗೆ ಕಡಿವಾಣ, ಎಡಿಬಿ ಕುಡ್ಸೆಂಪ್ 360 ಕೋಟಿಯ ಒಳಚರಂಡಿ ಭ್ರಷ್ಟಾಚಾರದ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಲು ಕ್ರಮ ತೆಗೆದು ಕೊಳ್ಳಲಾಗುವುದು’ ಎಂದು ಹೇಳಿದರು.
ನಗರದಲ್ಲಿ ಸುಸಜ್ಜಿತ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಕ್ರಮ, ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ, ಬೆಂಗರೆಗೆ ತೂಗು ಸೇತುವೆ ನಿರ್ಮಾಣ, ಕೆಪಿಟಿ, ನಂತೂರು ಮತ್ತು ಪಂಪ್ವೆಲ್ಗಳಲ್ಲಿ ಫ್ಲೈಓವರ್ ನಿರ್ಮಿಸುವುದು, ಮಂಗಳೂರು– ಬೆಂಗಳೂರು ನಡುವೆ ಹೆಚ್ಚುವರಿ ಇಂಟರ್ಸಿಟಿ ರೈಲು ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಕೆರೆಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಹಲವಾರು ಕೋಟಿ ಖರ್ಚು ಮಾಡಿದೆ ಎಂದು ಹೇಳಿಕೊಂಡಿದ್ದರೂ ಮಂಗಳೂರು ನಗರದಲ್ಲಿ ಕೆರೆಗಳ ಅಭಿವೃದ್ಧಿ ಆಗಿಲ್ಲ. ಸರ್ಕಾರಿ ಬಾವಿಗಳ ಸಮೀಕ್ಷೆ ನಡೆದಿದ್ದರೂ ಅವುಗಳಿಗೆ ಕಾಯಕಲ್ಪ ಒದಗಿಸಿಲ್ಲ. ಈ ನಿಟ್ಟಿನಲ್ಲಿ ಸಿಪಿಎಂ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಕೋಟಿ ಕೋಟಿ ಗಳಲ್ಲಿ ಮಾತನಾಡುವ ಬದಲು ಜನಸಾಮಾನ್ಯರ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಜೆ. ಬಾಲಕೃಷ್ಣ ಶೆಟ್ಟಿ, ಸಂತೋಷ್ ಬಜಾಲ್, ಜಯಂತಿ ಬಿ. ಶೆಟ್ಟಿ, ಸಂತೋಷ್ ಶಕ್ತಿನಗರ, ಯೋಗೀಶ್ ಜಪ್ಪಿನಮೊಗರು, ಸುರೇಶ್ ಬಜಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.