ವಿಟ್ಲ: ಕಬಕ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ರಮೇಶ್ ಭಟ್.ಬಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಬುಧವಾರ ನಡೆಯಿತು.
ಅತಿಥಿಯಾಗಿ ಆಗಮಿಸಿದ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಶ್ರೀನಿವಾಸ್ ಮಾತನಾಡಿ ಕಾಲು ಬಾಯಿ ಜ್ವರದ ಲಸಿಕೆಗಳ ಮಹತ್ವ ಹಾಗೂ ಸರ್ಕಾರದ ಅನುದಾನದಿಂದ ರಾಸುಗಳ ವಿಮೆ ಯೋಜನೆ, ಕರುಗಳನ್ನು ಸಾಕುವಾಗ ಉಪಯೋಗಿಸುವ ಪಶು ಆಹಾರಗಳ ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷ ಶಾಬಾ ಮಾತನಾಡಿ ಕಬಕ ಗ್ರಾ.ಪಂ.ನಿಂದ ಹೈನುಗಾರಿಕೆಗಳಿಗೆ ಸಿಗುವ ಸವಲತ್ತು ಗಳ ಬಗ್ಗೆ ವಿವರಿಸಿ ಸದ್ಯ ಹಟ್ಟಿ ನಿರ್ಮಿಸಲು ಸಹಾಯಧನ ದೊರಕುತ್ತಿದೆ ಎಂದರು. ಸಹಾಯಕ ವ್ಯವಸ್ಥಾಪಕ ಜನಾರ್ದನ ವಿವಿಧ ಯೋಜನೆಗಳ ಮಾಹಿತಿ ನೀಡಿದರು.
2012-–13ನೇ ಸಾಲಿನ ಸಂಘದ ಲಾಭಾಂಶ 1,47,226.39 ದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 83 ಪೈಸೆ ಲಾಭಾಂಶ ನೀಡಲಾಗುವುದೆಂದು ತಿಳಿಸಲಾಯಿತು.
2012–-13ನೇ ಸಾಲಿನಲ್ಲಿ ಸಂಘಕ್ಕೆ ಹಾಲು ಪೊರೈಸುವ ಸಂಘದ ಎಲ್ಲ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವಾಗಿ ಸ್ಟೀಲ್ ಬಕೆಟ್ ವಿತರಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಉಮ್ಮರ್ ಕಬಕ, ನಿರ್ದೇಶಕರಾದ ಅಕ್ಷಯ ಕುಮಾರ್ ಬಿ.ಎಸ್, ದಾಮೋದರ ನೆಕ್ಕರೆ, ಸತ್ಯನಾರಾಯಣ ಭಟ್ ಎ, ಕೆ.ನಾರಾಯಣ ಸಪಲ್ಯ, ಮಾಲತಿ, ಕುಸುಮಾ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ವಿ.ಚಂದ್ರಶೇಖರ ನಾಯ್ಕ ವಂದಿಸಿದರು. ಕಾರ್ಯದರ್ಶಿ ಗೀತಾ ವರದಿ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.