ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಟಥ ಕಾಮಗಾರಿ ಅವ್ಯವಸ್ಥೆಯಿಂದಾಗಿ ಹೆದ್ದಾರಿ ಪಕ್ಕದ ಅಂಗಡಿಗಳಿಗೆ ಮಳೆ ನೀರು ನುಗ್ಗುತ್ತಿದೆ. ಸರಿಯಾದ ಸರ್ವೀಸ್ ರಸ್ತೆ ಇಲ್ಲದ ಕಾರಣ ಪಾದಚಾರಿಗಳ ಸಂಚಾರಕ್ಕೂ ತೊಡಕಾಗುತ್ತಿದೆ.
ಪೂರ್ಣಗೊಳ್ಳದ ಸರ್ವೀಸ್ ರಸ್ತೆ: ಚತುಷ್ಪಥ ಕಾಮಗಾರಿಗೆ ಹಸಿರು ನಿಶಾನೆ ದೊರೆತ ಸಂದರ್ಭದಲ್ಲಿ, ಪಾದಚಾರಿಗಳ ಮತ್ತು ಲಘುವಾಹನಗಳ ಸಂಚಾರಕ್ಕಾಗಿ ರಸ್ತೆ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಪ್ರಸ್ತಾಪವಿತ್ತು. ಹೆದ್ದಾರಿಯ ಸಂಚಾರ ದಟ್ಟಣೆ ಕಡಿಮೆಗೊಳಿಸುವುದೂ ಇದರ ಉದ್ದೇಶವಾಗಿತ್ತು. ಸದಾ ವಾಹನ ದಟ್ಟಣೆ ಇರುವ ಸುರತ್ಕಲ್ನ ಸರ್ವೀಸ್ ರಸ್ತೆಗಳು ಇನ್ನೂ ಪೂರ್ಣಗೊಂಡಿಲ್ಲ.
ಪ್ರಸ್ತುತ ನಟರಾಜ್ ಟಾಕೀಸ್ ಮತ್ತು ಸರ್ವೀಸ್ ಬಸ್ ನಿಲ್ದಾಣದವರೆಗೆ ಸರ್ವೀಸ್ ರಸ್ತೆಯಿಲ್ಲ. ಈ ಪ್ರದೇಶದಲ್ಲೇ ಹೆಚ್ಚು ಜನಸಂಚಾರ ಹಾಗೂ ವಾಹನ ಸಂಚಾರವಿದ್ದು ವ್ಯಾಪಾರ ವಹಿವಾಟುಗಳೂ ನಡೆಯುವ ಪ್ರದೇಶ ಇದು.
ಮೇಲ್ಸೇತುವೆ ಪಕ್ಕ ಸುರತ್ಕಲ್ ಮಾರುಕಟ್ಟೆ ಬಳಿಯ ಸರ್ವೀಸ್ ರಸ್ತೆಗಳು ಪೂರ್ಣಗೊಂಡಿಲ್ಲ. ಇದರಿಂದಾಗಿ ಪಾದಚಾರಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಮೇಲ್ಸೇತುವೆ ಪಕ್ಕದ ಮಹಾಬಲೇಶ್ವರ ಕಟ್ಟಡ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತೆರವುಗೊಳಿಸಲು ವಿಳಂಬಗೊಂಡಿರುವುದು ಇಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ವಿಳಂಬವಾಗಲು ಕಾರಣ ಎನ್ನಲಾಗುತ್ತಿದೆ.
ಚರಂಡಿಯೂ ಅಸಮರ್ಪಕ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಬೇಕಾದ ಚರಂಡಿ ಕಾಮಗಾರಿಯೂ ಅಸಮರ್ಪಕವಾಗಿದೆ. ಚರಂಡಿಗಳಲ್ಲಿ ಹೂಳುತುಂಬಿದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ಬಾರಿ ಮಳೆಗಾಲದಲ್ಲಿ ನೀರು ಅಂಗಡಿಗಳಿಗೂ ನುಗ್ಗಿದೆ. ಸರ್ವೀಸ್ ರಸ್ತೆ ಇಲ್ಲದ ಕಡೆ ಚರಂಡಿಯನ್ನೂ ನಿರ್ಮಿಸಿಲ್ಲ. ಇದರಿಂದ ಮೇಲ್ಸೇತುವೆ ಪಕ್ಕದ ಚರಂಡಿಯ ಎರಡೂ ದಿಕ್ಕಿನಲ್ಲಿ ಹರಿಯುವ ನೀರು ಈ ರಸ್ತೆಗೆ ಬೀಳುತ್ತಿದ್ದು ವೀನಸ್ ಆಸ್ಪತ್ರೆ ಪಕ್ಕ ರಸ್ತೆಯಲ್ಲೇ ಹರಿಯುತ್ತದೆ. ಇದರಿಂದ ಕಸ ಕಡ್ಡಿಗಳು ತ್ಯಾಜ್ಯವಸ್ತುಗಳು ರಸ್ತೆಯಲ್ಲೇ ರಾಶಿಬೀಳುತ್ತಿದ್ದು, ಆಸ್ಪತ್ರೆ ಪರಿಸರವೂ ರೋಗ ಉತ್ಪತ್ತಿ ಕೇಂದ್ರವಾಗುತ್ತಿದೆ.
ಅವೈಜ್ಞಾನಿಕ ಮೇಲ್ಸೇತುವೆ: `ಮೇಲ್ಸೇತುವೆ ಕೆಳಗೆ ಹಲವೆಡೆ ಬಿರುಕುಗಳು ಕಾಣುತ್ತಿವೆ. ಮೇಲ್ಸೇತುವೆ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಅವೈಜ್ಞಾನಿಕವಾಗಿದೆ~ ಎಂದು ಸ್ಥಳೀಯರು ದೂರಿದ್ದಾರೆ.
ಸೂರಜ್ ಹೋಟೆಲ್ ಪಕ್ಕದಿಂದ ಎಕ್ಸ್ಪ್ರೆಸ್ ವಾಹನಗಳು ಮೇಲ್ಸೇತುವೆ ಮೂಲಕ ಮುಂದೆ ಸಾಗಿದರೆ, ಇತರ ವಾಹನಗಳು ಬಲಗಡೆ ತಿರುವು ಪಡೆದು ಮುಖ್ಯ ಹೆದ್ದಾರಿಯನ್ನು ಸಂಪರ್ಕಿಸಿ ಸುರತ್ಕಲ್ ಪೇಟೆಗೆ ಬರಬೇಕಾಗಿದೆ. ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳು ವೇಗವಾಗಿ ಬಂದರೆ ಅಪಘಾತವಾಗುವ ಅಪಾಯವಿದೆ.
ಮೇಲ್ಸೇತುವೆಯಲ್ಲಿ ಸಂಚರಿಸುವ ವಾಹನಗಳು ಅಂಚೆಕಚೇರಿ ಬಳಿ ಹೆದ್ದಾರಿ ಸೇರುತ್ತವೆ. ಸುರತ್ಕಲ್ ಪೇಟೆಯ ಮೂಲಕ ಬರುವ ವಾಹನಗಳೂ ಹೆದ್ದಾರಿಯ ಎಡಪಥವನ್ನು ಸೇರುವುದೂ ಇದೇ ಸ್ಥಳದಲ್ಲಿ. ಹಾಗಾಗಿ ಅಂಚೆಕಚೇರಿ ಪ್ರದೇಶ ಅಪಘಾತ ವಲಯವಾಗಿ ಪರಿಣಮಿಸುವ ಅಪಾಯವಿದೆ. ಈ ರಸ್ತೆ ಪಕ್ಕದಲ್ಲೇ ಮೂರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿದ್ದು, ಮಕ್ಕಳ ಓಡಾಟವೂ ಇಲ್ಲಿ ಹೆಚ್ಚಿದೆ.
ಮೇಲ್ಸೇತುವೆ ಎಡಬದಿಯ ಸರ್ವೀಸ್ ರಸ್ತೆ ಅಗಲಗೊಳಿಸಿ ಅದರ ಮೂಲಕವೇ ವಾಹನಗಳು ಸುರತ್ಕಲ್ ಪೇಟೆಗೆ ಬರಬೇಕು. ಆ ರಸ್ತೆಯನ್ನು ಅಂಚೆಕಚೇರಿ ಬಳಿ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದರೆ ಉತ್ತಮ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.