ADVERTISEMENT

ಹೊಸದುರ್ಗ: ಮರುಕಳಿಸಿದ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:40 IST
Last Updated 14 ಅಕ್ಟೋಬರ್ 2011, 8:40 IST

ಕಾಸರಗೋಡು: ಎರಡು ದಿನಗಳಿಂದ ಹಿಂಸಾಚಾರ ಸ್ಫೋಟಗೊಂಡು ಬುಧವಾರ ಹಗಲಿನಲ್ಲಿ ಶಾಂತವಾಗಿದ್ದ  ಹೊಸದುರ್ಗದಲ್ಲಿ ರಾತ್ರಿ ಹಿಂಸಾಚಾರ ಮರುಕಳಿಸಿದೆ.ಚಿತ್ತಾರಿಯ ಕೊಳವಯಲು ಚಾಮುಂಡಿಕುನ್ನು ಎಂಬಲ್ಲಿ ಬುಧವಾರ ರಾತ್ರಿ ಕಿಡಿಗೇಡಿಗಳು ಅದಿಞ್ಞಿಲಿನ ಸಿಪಿಎಂ ಕಾರ್ಯಕರ್ತರಾದ ಕರುಣಾಕರನ್ (35), ಬಾಬು (45), ಅನಿಲ್ ಕುಮಾರ್ (35) ಎಂಬವರ ಮೇಲೆ ಹಲ್ಲೆ ನಡೆಸಿದ್ದರು.

ಇದೇ ತಂಡ ಬುಧವಾರ ಸಂಜೆ ಕೊಳವಯಲು ಮೈದಾನದಲ್ಲಿ ಆಟವಾಡಲು ಬಂದಾಗ ಸಿಪಿಎಂ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಉದ್ರಿಕ್ತಗೊಂಡ ತಂಡ ಮತ್ತಷ್ಟು ಜನರನ್ನು ಸೇರಿಸಿಕೊಂಡು ರಾತ್ರಿ ಹೊತ್ತು ಹಿಂಸಾಚಾರಕ್ಕೆ ಇಳಿಯಿತು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಲಾಯಿತು. ಇದರಿಂದ ಡಿವೈಎಸ್‌ಪಿ ಮಧುಸೂದನ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದರು.

ಘಟನೆ ಹಿನ್ನೆಲೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಬಸ್‌ಗಳು ಭಾಗಶಃ ಸಂಚಾರ ನಡೆಸಿತು.ಡಿಐಜಿ ಎಸ್.ಶ್ರೀಜಿತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶುಕನ್, ಕಣ್ಣೂರು ಕ್ರೈಂ ಬ್ರ್ಯಾಂಚ್ ಡಿವೈಎಸ್‌ಪಿ ಪಿ.ಎ.ವಸಂತನ್, ಕಲ್ಲಿಕೋಟೆ ಟ್ರಾಫಿಕ್ ಎಸ್.ಪಿ. ರವೀಂದ್ರನ್ ನೇತೃತ್ವದಲ್ಲಿ ಬಿಗಿ ಬಂದೋ  ಬಸ್ತ್ ಮಾಡಲಾಗಿದೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಒಟ್ಟಾರೆ 60 ಮಂದಿಯನ್ನು ಬಂಧಿಸಲಾಗಿದೆ.ಹಿಂಸಾಚಾರದಿಂದ ಹೊಸದುರ್ಗ ಪೇಟೆಯಲ್ಲಿ ರೂ.1.10 ಕೋಟಿ ನಷ್ಟ ಉಂಟಾಗಿದೆ. 30ರಷ್ಟು ವ್ಯಾಪಾರ ಸಂಸ್ಥೆಗಳಿಗೆ ಹಾನಿಯಾಗಿದೆ. 35ಕ್ಕೂ ಅಧಿಕ ಮನೆಗಳು ಹಾನಿಗೊಂಡಿದೆ. 50ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದೆ.

ದಿಗ್ಬಂಧನ: ಬುಧವಾರ ರಾತ್ರಿ ಹಿಂಸಾಚಾರ ನಡೆಸಿದ್ದಾರೆ ಎನ್ನಲಾದ ಆರೋಪಿಗಳನ್ನು ಬಂಧಿಸಲು ಪೊಲೀಸರು ಗುರುವಾರ ಬೆಳಿಗ್ಗೆ ಕೊಳವಯಲಿಗೆ ಬಂದಾಗ 300ರಷ್ಟು ಮಹಿಳೆಯರ ಸಹಿತ ಸ್ಥಳೀಯರು ಗುಂಪುಗೂಡಿ ಬಂಧನ ತಡೆದರು.

3 ಪೊಲೀಸ್ ಬಸ್ ಮತ್ತು ಜೀಪ್‌ಗಳಲ್ಲಿ ಪೊಲೀಸರು ಬಂದಾಗ ಕೆಲವರು ಸಮುದ್ರಕ್ಕೆ ಹಾರಿದರು. ಇನ್ನು ಕೆಲವರು ಸಮೀಪದ ಹೊಳೆಗೆ ಹಾರಿ ಪರಾರಿಯಾದರು. ಈ ವೇಳೆ ಸ್ಥಳದಲ್ಲಿದ್ದ ಕೆಲವರನ್ನು ಬಂಧಿಸಲು ಪೊಲೀಸರು ಮುಂದಾದರು. ಇದನ್ನು ಪ್ರತಿಭಟಿಸಿ ಸ್ಥಳೀಯರು ಪೊಲೀಸರನ್ನು ದಿಗ್ಬಂಧನಕ್ಕೆ ಒಳಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.