ADVERTISEMENT

‘ದೂರದೃಷ್ಟಿಯ ನಾಯಕರಿಂದ ಮುಖಂಡರ ಸೃಷ್ಟಿ’

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 10:16 IST
Last Updated 19 ಡಿಸೆಂಬರ್ 2013, 10:16 IST

ಕಾರ್ಕಳ: ದೂರದೃಷ್ಟಿಯುಳ್ಳ ಮಹಾನ್ ನಾಯಕರು ವಿದ್ಯಾಸಂಸ್ಥೆ­ಗಳನ್ನು ಕಟ್ಟಿ ಬೆಳೆಸುತ್ತಾರೆ. ನಂತರ ಅಂತಹ ವಿದ್ಯಾಸಂಸ್ಥೆಗಳು ಅನೇಕ ನಾಯಕರನ್ನು ಸೃಷ್ಟಿಸುತ್ತವೆ ಎಂದು ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಆರ್ ಸುಬ್ರಹ್ಮಣ್ಯ ತಿಳಿಸಿದರು.

ಇಲ್ಲಿನ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಭವನದಲ್ಲಿ ಬುಧವಾರ ಪ್ರೊ.ಕೆ.ದಾಮೋದರ ಕಿಣಿ ಸಂಸ್ಮರಣಾ ಉಪನ್ಯಾಸ ನೀಡಿದ ಅವರು ಶ್ರೇಷ್ಠ ಶಿಕ್ಷಣ ತಜ್ಞರು ಹಾಗೂ ಮಹಾನ್ ನಾಯಕರಾದ ಜೆ.ಆರ್.ಡಿ ಟಾಟಾ, ಡಾ.ಸಿ.ವಿ.ರಾಮನ್, ಸರ್ವಪಲ್ಲಿ ರಾಧಾಕೃಷ್ಣನ್, ಚಿನ್ಮಾಯಾನಂದ ಸರಸ್ವತಿ, ಶಂಕರಾಚಾರ್ಯ ಮುಂತಾದ ಶಿಕ್ಷಣವೇತ್ತರ ಜೀವನದ ಘಟನೆಗಳು ಹಾಗೂ ಶಿಕ್ಷಣಕ್ಕೆ ಅವರ ಕೊಡುಗೆಯನ್ನು ಉಲ್ಲೇಖಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಮಾತನಾಡಿ ಶಿಸ್ತು ಎನ್ನುವುದು ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಎಲ್ಲಿಯವರೆಗೆ ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ಶಿಸ್ತಿನಿಂದ ಇರಿಸುವುದಿಲ್ಲವೋ ಅಲ್ಲಿಯವರೆಗೂ ಜೀವನದಲ್ಲಿ ಶಿಸ್ತು ಅಸಾಧ್ಯ. ಆದುದರಿಂದ ಸ್ವಯಂ ಶಿಸ್ತು ಹಾಗೂ ಸಂಯಮ ಅತ್ಯಗತ್ಯ. ಕಲಿಯುವುದನ್ನು ಹಿರಿಯರಿಂದಲೇ ಕಲಿಯಬೇಕೆಂದೇನಿಲ್ಲ, ಯಾರಿಂದಲೂ ಕಲಿಯಬಹುದು. ಮನುಷ್ಯನಿಗೆ ಕಲಿಯಲು ಅಸಾಧ್ಯವಾದುದು ಯಾವುದೂ ಇಲ್ಲ. ಯಾವಾಗ ಬೇಕಾದರೂ ಕಲಿಯುವ ಸಾಮರ್ಥ್ಯ ಇದೆ. ಆದರೆ ಆತ್ಮಸ್ಥೈರ್ಯ ಬಹಳ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಪ್ರೊ.ಕೆ.ಡಿ.ಕಿಣಿ ಸಂಸ್ಮರಣಾ ದಿನದ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ  ಎಸ್.ರಾಜಗೋಪಾಲ ಆಚಾರ್ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಪ್ರೊ.ಎಂ.ರಾಮಚಂದ್ರ ದಾಮೋದರ ಕಿಣಿ ವ್ಯಕ್ತಿತ್ವ ಪರಿಚಯ ಮಾಡಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ಪಾಂಡುರಂಗ ನಾಯಕ್ ವಂದಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ  ಗೌತಮ್ ಶೆಟ್ಟಿ, ಕಾರ್ಯದರ್ಶಿ ಶರಣ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.