ಉಳ್ಳಾಲ: ನಟ ಆದಿತ್ಯ ಶುಕ್ರವಾರ ಕುತ್ತಾರು ಶ್ರೀ ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿ ಹರಕೆ ಸಲ್ಲಿಸಿದರು.
‘ಬೇಜಾರಾದಾಗ ಮಂಗಳೂರಿಗೆ ಬರುತ್ತೇನೆ. ಕರಾವಳಿಯ ಪುಣ್ಯಕ್ಷೇತ್ರಗಳ ದರ್ಶನ ಮಾಡಿದರೆ ಮನಸ್ಸಿಗೆ ಒಂದಷ್ಟು ಖುಷಿ ಕೊಡುತ್ತದೆ. ಬೇಡಿಕೆಯೊಂದನ್ನು ಸ್ನೇಹಿತನ ಮಾತಿನಂತೆ ಕೊರಗಜ್ಜ ಈಡೇರಿಸಿದ. ತಿಂಗಳು ಕಳೆದ ಬಳಿಕ ತಡವಾಗಿ ಹರಕೆಯನ್ನು ತೀರಿಸಿದ್ದೇನೆ’ ಎಂದು ನಟ ಹೇಳಿದರು.
ಕಾರಣಿಕ ದೈವಗಳಾದಮುನ್ನೂರು ಗ್ರಾಮದ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಹಾಗೂ ಕೊರಗತನಿಯ ದೈವಗಳಿಗೆ ಪೂಜಾ ಕೈಂಕರ್ಯಕ್ಕೆ ಬೇಕಾದ ದೀಪದ ಎಣ್ಣೆ ತಯಾರಿಸುತ್ತಿದ್ದ ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿರುವ ಗಾಣದಮನೆಯ ಕಾಮಗಾರಿ ವೀಕ್ಷಿಸಿದರು. ‘ ನನಗೆ ಬಾಲ್ಯದಿಂದಲೂ ಇಲ್ಲಿಯ ನಂಟು ಇದೆ. ನಾನು ಮನೆಯಲ್ಲಿ ಕೊಂಕಣಿ ಮಾತನಾಡುತ್ತೇನೆ. ತುಳು ಕಲಿಯಬೇಕು ಎಂಬ ಆಸೆ ಇದೆ. ನಿಧಾನವಾಗಿಕಲಿಯುತ್ತಿದ್ದೇನೆ’ ಎಂದರು.
‘ಹಾಸ್ಯ ಪ್ರಧಾನ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಬಹಳಷ್ಟಿದೆ. ಆದರೆ ಎಲ್ಲ ನಿರ್ದೇಶಕರು ಮಚ್ಚು ಕತ್ತಿಯೇ ಕೊಡುತ್ತಿದ್ದಾರೆ. ದಯವಿಟ್ಟು ಯಾರಾದರೂ ಒಳ್ಳೆಯ ನಿರ್ದೇಶಕರು ಒಳ್ಳೆಯ ಹಾಸ್ಯ ಪ್ರಧಾನ ಚಿತ್ರದ ಕಥೆ ಹಿಡಿದುಕೊಂಡು ಬನ್ನಿ, ನಾನು ಸದಾ ನಿಮ್ ಜೊತೆಗೆ ಇದ್ದೇನೆ ಎಂದು ಹೇಳಿದರು.
‘ಮುಂದುವರಿದ ಅಧ್ಯಾಯ’ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ತೆರೆಗೆ ಬರಲಿದ್ದು, ಓಂ ಪ್ರಕಾಶ್ ನಿದೇಶನದ ’ಆಪರೇಷನ್ ಟೈಗರ್' ಭಾಗಶಃ ಮುಗಿದಿದೆ. ಡೆಡ್ಲಿ ಸೋಮ ಆಯಿತು, ‘ಡೆಡ್ಲಿ -2’ ಆಯಿತು ಈಗ ರವಿ ಶ್ರೀವಾಸ್ತವ ‘ಡೆಡ್ಲಿ-3’ ಮಾಡುತ್ತಿದ್ದಾರೆ. ಜನವರಿಯಿಂದ ಮಂಗಳೂರಿನಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ. ಇತರ ಭಾಷೆಗಳಲ್ಲಿ ಆಫರ್ ಬಂದಿದೆ. ಚಿತ್ರ ನಿರ್ಮಾಣ ಮಾಡ್ತಿದ್ದೆ, ಸದ್ಯಕ್ಕೆ ನಿರ್ಮಣ ಯೋಜನೆ ಇಲ್ಲ. ನಟನೆಗೆ ಮಾತ್ರ ಆದ್ಯತೆ. ಬಹಳಷ್ಟು ಕನ್ನಡ ಸಿನಿಮಾ ಯಶಸ್ಸು ಕಾಣುತ್ತಿದ್ದು, ಎಲ್ಲೋ ಒಂಥರಾ ಹೆಮ್ಮೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.