ಬದಿಯಡ್ಕ: ಚೆರ್ಕಳದಿಂದ ಬದಿಯಡ್ಕ ಮಾರ್ಗವಾಗಿ ಅಡ್ಕಸ್ಥಳಕ್ಕೆ ಸಾಗುವ ಮುಖ್ಯ ರಸ್ತೆಯು ಭಾರೀ ಗಾತ್ರದ ಹೊಂಡಗಳಿಂದ ತುಂಬಿಕೊಂಡಿದ್ದು, ವಾಹನಗಳಲ್ಲಿ ಸಂಚರಿಸುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ.
ಈ ರಸ್ತೆಯ ದುರಸ್ತಿಗಾಗಿ ನಾಗರಿ ಕರು ಅನೇಕ ಬಾರಿ ಇಲಾಖೆಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಇಲಾಖೆಯ ಧೋರಣೆಯನ್ನು ಖಂಡಿಸಿ ಇದೇ 13ರಿಂದ 19ರ ತನಕ ಸರಣಿ ರಸ್ತೆ ತಡೆ ನಡೆಸಲು ರಸ್ತೆ ದುರಸ್ತಿ ಕ್ರಿಯಾ ಸಮಿತಿ ಹಾಗೂ ನಾಗರಿಕರು ನಿರ್ಧರಿಸಿದ್ದಾರೆ. 11ರಂದು ಈ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಮಾಲೀಕರು ಹಾಗೂ ಚಾಲಕರು ಸಂಚಾರ ಮೊಟಕುಗೊಳಿಸಿ, ರಸ್ತೆ ದುರಸ್ತಿಗೆ ಒತ್ತಾಯಿಸಲಿದ್ದಾರೆ.
ಪ್ರತಿಭಟನೆಯ ಅಂಗವಾಗಿ ಚೆರ್ಕಳ, ಎಡನೀರು, ನೆಲ್ಲಿಕಟ್ಟೆ, ಬದಿಯಡ್ಕ, ಪಳ್ಳತ್ತಡ್ಕ, ಉಕ್ಕಿನಡ್ಕ, ಪೆರ್ಲ, ಅಡ್ಕಸ್ಥಳ ಮೊದಲಾದ ಪ್ರದೇಶಗಳಲ್ಲಿ ರಸ್ತೆ ತಡೆ ನಡೆಸಲು ನಿರ್ಧರಿಸಲಾಗಿದೆ. ಮಳೆಗಾಲ ಆರಂಭವಾಗುವ ಮೊದಲೇ ರಸ್ತೆ ಹೊಂಡಗಳ ದುರಸ್ತಿಗಾಗಿ ಇಲಾಖೆಗೆ ನಾಗರಿಕರು ಮನವಿ ಸಲ್ಲಿಸಿದ್ದರು.
ಸುಮಾರು 29 ಕಿಲೋಮೀಟರ್ ಉದ್ದದ ಈ ರಸ್ತೆಯ ನವೀಕರಣಕ್ಕಾಗಿ ಪರಿಶೀಲನೆ ನಡೆದು 9 ತಿಂಗಳ ಹಿಂದೆ ಯೇ ₹ 30 ಕೋಟಿಯಷ್ಟು ಮೊತ್ತ ಮೀಸ ಲಿಡಲಾಗಿತ್ತು. ಆದರೆ ಇನ್ನೂ ಕೂಡಾ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಯಾಗಿದೆ ಎಂದು ನಾಗರಿಕರು ಆರೋಪಿಸುತ್ತಾರೆ.
ಈ ಹೆದ್ದಾರಿಯಲ್ಲಿ ಈಗಾಗಲೇ ಭಾರೀ ಹೊಂಡಗಳು ನಿರ್ಮಾಣವಾಗಿದ್ದು, ಲಘು ವಾಹನಗಳು ಸಂಚರಿಸುವುದಕ್ಕೆ ಕಷ್ಟ ಪಡುತ್ತಿವೆ. ಉಕ್ಕಿನಡ್ಕದಿಂದ ಅಡ್ಕಸ್ಥಳದ ತನಕ ರಸ್ತೆಯ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಈಚೆಗೆ ನಡೆದರೂ, ಅವುಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ನಲ್ಕದಲ್ಲಿ ಕಳೆದ ವರ್ಷ ಸುಮಾರು 10 ಮೀಟರಿನಷ್ಟು ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗಿತ್ತು. ಆದರೆ ಇದೇ ಪರಿಸರದಲ್ಲಿ ನೀರು ಸಂಗ್ರಹವಾಗುವ ಅನೇಕ ಹೊಂಡಗಳ ಮುಚ್ಚುವಿಕೆಯ ಕಾಮಗಾರಿ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮಂಜೇಶ್ವರ ಹಾಗೂ ಕಾಸರಗೋಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಈ ರಸ್ತೆಯ ದುರಸ್ತಿಯ ಬಗ್ಗೆ ಉಭಯ ಕ್ಷೇತ್ರದ ಶಾಸಕರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.