ಪುತ್ತೂರು: ‘ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ಎಂಬಲ್ಲಿ ಪುತ್ತೂರು -ಉಪ್ಪಿನಂಗಡಿ ಹೆದ್ದಾರಿ ಪಕ್ಕದಲ್ಲಿರುವ ಮನೆಯೊಂದರಿಂದ ಕಳ್ಳರು ₹2.20 ಲಕ್ಷ ನಗದು ಹಣ ದೋಚಿದ್ದಾರೆ ಎಂದು ಭಾನುವಾರ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಕಾಮಗಾರಿ ಗುತ್ತಿಗೆದಾರ ಅಶ್ರಫ್ ಎಂಬುವರಿಗೆ ಸೇರಿದ ದಾರಂದಕುಕ್ಕು ಜಂಕ್ಷನ್ ಬಳಿಯಿರುವ ಮನೆಯಲ್ಲಿಕಳ್ಳತನ ನಡೆದಿದೆ. ಮಕ್ಕಳಿಗೆ ದಸರಾ ರಜೆಯಿದ್ದುದರಿಂದ ಅಶ್ರಫ್ ಇದೇ 2ರಂದು ಮನೆಗೆ ಬೀಗ ಹಾಕಿ ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರಿನಲ್ಲಿರುವ ಪತ್ನಿ ಮನೆಗೆ ಹೋಗಿದ್ದರು. ಶನಿವಾರ ಮನೆಗೆ ಹಿಂತಿರುಗಿ ಬಂದಾಗ ಕೃತ್ಯ ಬಹಿರಂಗವಾಗಿದೆ.
ಹಣ ಮತ್ತು ಆಭರಣಕ್ಕಾಗಿ ಕಳ್ಳರು ಕೊಠಡಿಯೊಳಗಿನ ಕಪಾಟು,ಮನೆಯೊಳಗಿದ್ದ ಬಟ್ಟೆಬರೆಗಳು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿರುವುದು ಕಂಡು ಬಂದಿತ್ತು.
ಮನೆಯ ಕೋಣೆಯೊಂದರ ಕಪಾಟಿನಲ್ಲಿ ಕೆಲಸಗಾರರಿಗೆ ಸಂಬಳ ಬಟಾವಡೆ ಮಾಡಲೆಂದು ಇರಿಸಲಾಗಿದ್ದ ₹2.20ಲಕ್ಷ ನಗದು ಹಣ ಕಳವಾಗಿತ್ತು. ಕಳ್ಳರು ಮನೆಯ ಹಿಂಭಾಗದಲ್ಲಿರುವ ಶೌಚಾಲಯ ಕೊಠಡಿಯ ವೆಂಟಿಲೇಟರ್ ಮೂಲಕ ಪ್ರವೇಶಿಸಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಪುತ್ತೂರು ನಗರ ಪೊಲೀಸರು ಸ್ಥಳ ಭೇಟಿ ನಡೆಸಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.