ADVERTISEMENT

ದ.ಕ: ಸಾವಿನ ಸಂಖ್ಯೆ 290ಕ್ಕೆ ಏರಿಕೆ

234 ಹೊಸ ಪ್ರಕರಣ: 115 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 7:14 IST
Last Updated 20 ಆಗಸ್ಟ್ 2020, 7:14 IST

ಮಂಗಳೂರು: ಜಿಲ್ಲೆಯಲ್ಲಿ ಬುಧವಾರ 234 ಮಂದಿಗೆ ಕೋವಿಡ್–19 ದೃಢವಾಗಿದ್ದು, 115 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟ ನಾಲ್ವರಲ್ಲಿ ಕೋವಿಡ್‌–19 ದೃಢವಾಗಿದ್ದು, ಸಾವಿನ ಸಂಖ್ಯೆ 290ಕ್ಕೆ ಏರಿದೆ.

ವಿವಿಧ ರೋಗಗಳಿಂದ ಬಳಲುತ್ತಿದ್ದ ಮಂಗಳೂರಿನ ಇಬ್ಬರು ಹಾಗೂ ಹೊರ ಜಿಲ್ಲೆಯ ಇಬ್ಬರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಇರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

104 ಐಎಲ್‌ಐ ಪ್ರಕರಣ: ಬುಧವಾರ ದೃಢಪಟ್ಟಿರುವ 234 ಪ್ರಕರಣಗಳಲ್ಲಿ, 104 ಐಎಲ್‌ಐ ಪ್ರಕರಣಗಳಿವೆ. 18 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್–19 ತಗುಲಿದ್ದು, 35 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. 76 ಮಂದಿ ಸೋಂಕಿನ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. ಒಬ್ಬರು ಬೇರೆ ರಾಜ್ಯದಿಂದ ಬಂದವರಿಗೆ ಕೋವಿಡ್–19 ದೃಢವಾಗಿದೆ.

ADVERTISEMENT

67 ಪುರುಷರು ಹಾಗೂ 38 ಮಹಿಳೆಯರು ಸೇರಿದಂತೆ 105 ಜನರಲ್ಲಿ ರೋಗ ಲಕ್ಷಣಗಳಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇನ್ನು 75 ಪುರುಷರು ಹಾಗೂ 54 ಮಹಿಳೆಯರು ಸೇರಿದಂತೆ 129 ಮಂದಿಗೆ ರೋಗ ಲಕ್ಷಣಗಳಿಲ್ಲ. ಅವರಿಗೆ ಕೋವಿಡ್ ಕೇರ್‌ ಸೆಂಟರ್, ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳೂರು ತಾಲ್ಲೂಕಿನಲ್ಲಿ ಗರಿಷ್ಠ 148 ಪ್ರಕರಣಗಳು ಪತ್ತೆಯಾಗಿದ್ದು, ಬಂಟ್ವಾಳ 29, ಪುತ್ತೂರು 14, ಸುಳ್ಯ 13 ಹಾಗೂ ಇತರ ಜಿಲ್ಲೆಗಳ 23 ಜನರಿಗೆ ಕೋವಿಡ್–19 ಖಚಿತವಾಗಿದೆ.

115 ಮಂದಿ ಗುಣಮುಖ: ಈ ಮಧ್ಯೆ ಜಿಲ್ಲೆಯಲ್ಲಿ 115 ಮಂದಿ ಗುಣಮುಖರಾಗಿದ್ದು, ಮನೆಗಳಿಗೆ ತೆರಳಿದ್ದಾರೆ. ಹೋಂ ಐಸೋಲೇಷನ್‌ನಲ್ಲಿದ್ದ 95, ಆಸ್ಪತ್ರೆಗಳಲ್ಲಿದ್ದ 20 ಜನರ ಗಂಟಲು ದ್ರವದ ಮಾದರಿಯ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಕಾಸರಗೋಡು: 174 ಮಂದಿಗೆ ಕೋವಿಡ್‌

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಅತ್ಯಧಿಕ ಪ್ರಕರಣಗಳು ವರದಿಯಾಗಿದ್ದು, ಒಟ್ಟು 174 ಮಂದಿಗೆ ಕೋವಿಡ್–19 ದೃಢಪಟ್ಟಿದೆ.

ಈ ಪೈಕಿ 154 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 15 ಮಂದಿ ವಿದೇಶದಿಂದ ಹಾಗೂ ಐದು ಮಂದಿ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ. ಈ ನಡುವೆ 89 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,576 ಕ್ಕೆ ಏರಿದ್ದು, 941 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.