ಉಳ್ಳಾಲ: ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ದೃಷ್ಟಿಯಿಂದ ಹಿಂದೂ ದೇವರ ಮೇಲೆ ವಿಪರೀತ ನಂಬಿಕೆ ಇರುವಂತೆ ನಟಿಸುತ್ತಿದ್ದು, ಚುನಾವಣೆಗಾಗಿ ಗುಜರಾತಿನಲ್ಲಿ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುವ ಗಿಮಿಕ್ ರಾಜಕೀಯ ರಾಜ್ಯದಲ್ಲೂ, ಅದರಲ್ಲೂ ಮಂಗಳೂರು ಕ್ಷೇತ್ರದಲ್ಲೂ ನಡೆಯುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮಾಯಣ, ಮಹಾಭಾರತ ಎಂಬುದು ನಡೆದೇ ಇಲ್ಲ, ರಾಮಸೇತು ಕಾಲ್ಪನಿಕ ಎಂದವರು, ಪರಮ ಪಾವನ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಕೋಳಿ, ಮೀನು ತಿಂದು ದರ್ಶನಗೈದವರು, ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ, ಹಿಂದೂಗಳ ಮಾರಣ ಹೋಮವಾಗುತ್ತಿದ್ದರೂ ಮೌನವಾಗಿದ್ದವರು ಇದೀಗ ಎಚ್ಚೆತ್ತುಕೊಂಡಿದ್ದಾರೆ’ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮಂಗಳೂರು ಕ್ಷೇತ್ರದಲ್ಲಿ ಹಿಂದೂ– ಮುಸ್ಲಿಮರನ್ನು ಎತ್ತಿ ಕಟ್ಟಿ, ಒಡೆದು ಆಳುವ ಕೆಲಸ ಇಲ್ಲಿನ ಶಾಸಕರು ಮಾಡುತ್ತಿದ್ದಾರೆ. ಅಪರಾಧಿಗಳನ್ನು, ಕಿಡಿಗೇಡಿಗಳನ್ನು, ಮತಾಂಧರನ್ನು ಪೋಷಿಸುವ ಕೆಲಸ ಕಾಂಗ್ರೆಸ್ನಿಂದ ಆಗುತ್ತಿದೆ ಎಂದು ಆಪಾದಿಸಿದರು.
‘ಸ್ವಾಮಿ ಕೊರಗಜ್ಜ, ದೇಯಿ ಬೈದ್ಯೆತಿ, ಕಟೀಲಮ್ಮ, ಶ್ರೀರಾಮ, ಶ್ರೀಕೃಷ್ಣ, ಹನುಮಂತನ ಬಗ್ಗೆ ಮತಾಂಧರು ಸಾಮಾಜಿಕ ತಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸುವಾಗ ಎಲ್ಲಿ ಹೋಗಿದ್ದೀರಿ? ಕಾಂಗ್ರೆಸ್ಸಿಗರಿಗೆ ಈಗ ತುಳುನಾಡಿನ ಕಾರಣಿಕ ದೈವಗಳ ನೆನಪು ಬಂತಾ’ ಎಂದು ಮೋಹನ್ ರಾಜ್ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.