ADVERTISEMENT

ತೊಕ್ಕೊಟ್ಟು: ಕೆಲ ಕಾಲ ಗೊಂದಲ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 5:41 IST
Last Updated 7 ಜನವರಿ 2018, 5:41 IST
ತೊಕ್ಕೊಟ್ಟು ಸಮೀಪ ಿಂದಿರಾ ಕ್ಯಾಂಟೀನ್‌ ಕಾಮಗಾರಿವೇಳೆ, ಕೊರಗಜ್ಜನ ಕಟ್ಟೆಯ ವಿಚಾರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತೊಕ್ಕೊಟ್ಟು ಸಮೀಪ ಿಂದಿರಾ ಕ್ಯಾಂಟೀನ್‌ ಕಾಮಗಾರಿವೇಳೆ, ಕೊರಗಜ್ಜನ ಕಟ್ಟೆಯ ವಿಚಾರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.   

ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್ ಬಳಿ ಸರ್ಕಾರಿ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಜಾಗ ಸಮತಟ್ಟು ಮಾಡಲು ಶನಿವಾರ ತೆರಳಿದ ಪುರಸಭಾ ಅಧಿಕಾರಿಗಳು ಮತ್ತು ಸ್ಥಳೀಯರ ಮಧ್ಯೆ ಕೆಲಕಾಲ ಕೊರಗಜ್ಜನ ಕಟ್ಟೆಯ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊನೆಗೆ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮಾತುಕತೆ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಯಿತು.

ಸಚಿವ ಯು.ಟಿ.ಖಾದರ್ ಅವರ ಶಾಸಕತ್ವದ ಸರ್ಕಾರಿ ಅನುದಾನದಲ್ಲಿ  ಇಂದಿರಾ ಕ್ಯಾಂಟಿನ್ ನಿರ್ಮಿಸಲು ತೊಕ್ಕೊಟ್ಟಿನಲ್ಲಿ  ಜಾಗ ನಿರ್ಧರಿಸಲಾಗಿತ್ತು.ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.  ಲಾರಿ ಚೆಕ್‍ಪೋಸ್ಟ್  ಹಿಂಬದಿಯ ಜಾಗವನ್ನು ಗುರುತಿಸಿ ಸಮತಟ್ಟು ಮಾಡಲು ಶನಿವಾರ ಕಾರ್ಮಿಕರೊಂದಿಗೆ ಉಳ್ಳಾಲ ನಗರಸಭೆಯ ಅಧಿಕಾರಿಗಳು ಜನಪ್ರತಿನಿಧಿಗಳು  ತೆರಳಿದ್ದರು.

‘ಈ ಸಂದರ್ಭದಲ್ಲಿ ಒಂದು ತಂಡ ಜಾಗ ಸಮತಟ್ಟು ಮಾಡುವಾಗ ಕೊರಗಜ್ಜನ ಕಟ್ಟೆಯನ್ನು ಸ್ಥಳಾಂತರಿಸಲಾಗುತ್ತಿದೆ’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸುದ್ಧಿ ಹರಡಿದ ಕಾರಣ ಸ್ಥಳದಲ್ಲಿ ಜನರು ಜಮಾಯಿಸಿದ್ದರು.

ADVERTISEMENT

ಅಧಿಕಾರಿಗಳು ‘ನಾವು ಯಾವುದೇ ಕಟ್ಟೆಯನ್ನು ತೆಗೆಯುತ್ತಿಲ್ಲ. ಹಳೆ ಸರ್ಕಾರಿ ಕಟ್ಟಡವನ್ನು ಕೆಡವಿ ಜಾಗ ಸಮತ್ತಟ್ಟು ಮಾಡಿ ಆವರಣ ಗೋಡೆ ನಿರ್ಮಿಸಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು. ಧಾರ್ಮಿಕ ತಾಣಗಳಿಗೆ ಯಾವುದೇ ಹಾನಿ ಮಾಡಲಾಗುವುದಿಲ್ಲ’ ಎಂದು ತಿಳಿಸಿದರು. ವಾಗ್ವಾದವೂ ನಡೆಯಿತು. ಬಳಿಕ ಜನಪ್ರತಿನಿಧಿಗಳ ಮದ್ಯಸ್ತಿಕೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು.

ಉಳ್ಳಾಲ ನಗರಸಭೆಯ ಮುಖ್ಯಾಧಿಕಾರಿ ವಾಣಿ ಆಳ್ವ ಮಾತನಾಡಿ ‘ಸರ್ಕಾರದ ಆದೇಶದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸರ್ವೇ ನಂಬ್ರ:66-ಎ2ಬಿ2 ರ 0.22ಸೆಂಟ್ಸ್ ಸ್ಥಳವನ್ನು ಗುರುತಿಸಿದ್ದು, ಸ್ಥಳದಲ್ಲಿರುವ ಹಳೇ ಕಟ್ಟಡವನ್ನು ಕೆಡವಿ ಸಮತಟ್ಟು ಮಾಡಿ ಆವರಣಗೋಡೆ ನಿರ್ಮಿಸಲು ತೀರ್ಮಾನಿಸಿದಂತೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ತೆರಳಿದ್ದರು. ನಗರ ಸಭೆಯಿಂದ ಜಾಗದಲ್ಲಿರುವ ಕೊರಗಜ್ಜನ ಕಟ್ಟೆ ಕೆಡವಲು ಯಾವುದೇ ಆದೇಶವನ್ನು ನಗರಸಭೆಯಿಂದ ನೀಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.