ADVERTISEMENT

ಬೆಂಕಿಯಲ್ಲಿ ಸಿಲುಕಿದ್ದ 10 ವಿದ್ಯಾರ್ಥಿಗಳ ರಕ್ಷಣೆ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 8:29 IST
Last Updated 21 ಜನವರಿ 2018, 8:29 IST
ಮಂಗಳೂರಿನ ರೊಸಾರಿಯೊ ಶಾಲೆಯಲ್ಲಿ ಶನಿವಾರ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ವಿಪತ್ತು ನಿರ್ವಹಣೆಯ ಅಣಕು ಕಾರ್ಯಾಚರಣೆ ನಡೆಯಿತು.
ಮಂಗಳೂರಿನ ರೊಸಾರಿಯೊ ಶಾಲೆಯಲ್ಲಿ ಶನಿವಾರ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ವಿಪತ್ತು ನಿರ್ವಹಣೆಯ ಅಣಕು ಕಾರ್ಯಾಚರಣೆ ನಡೆಯಿತು.   

ಮಂಗಳೂರು: ಬೆಳಿಗ್ಗೆ 10.30 ಆಗಿರಬಹುದು. ಶಾಲಾ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ದಟ್ಟ ಹೊಗೆ ಆವರಿ ಸಿಕೊಂಡಿತು. ಪಾಠ ಕೇಳುವುದರಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿಗಳಲ್ಲಿ ಆತಂಕ.

ಏನಾಗುತ್ತಿದೆ ಎಂದು ಯೋಚಿಸುವಷ್ಟೂ ಸಮಯ ಇರಲಿಲ್ಲ. ಕೆಲ ಮಕ್ಕಳು ಮೆಟ್ಟಿಲುಗಳಿಂದ ಕೆಳಗೆ ಇಳಿದು ಬರುವಲ್ಲಿ ಯಶಸ್ವಿಯಾದರು. ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆಯೇ ಎಂದು ಪರಿಶೀಲಿಸಿದ ಶಿಕ್ಷಕರು ಆತಂಕದ ಛಾಯೆ ಆವರಿಸಿತ್ತು. 10 ಮಕ್ಕಳು ಕಾಣು ತ್ತಿಲ್ಲ. ಅವರೆಲ್ಲ ಎರಡನೇ ಮಹಡಿಯಲ್ಲಿ ಸಿಲುಕಿರುವುದು ಖಾತರಿಯಾಯಿತು.

ಕೂಡಲೇ ಮುಖ್ಯ ಶಿಕ್ಷಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ, ವಿಷಯ ತಿಳಿಸಿದರು. ಕೆಲವೇ ಕ್ಷಣಗಳಲ್ಲಿ ಶಾಲೆಗೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ, ರಕ್ಷಣಾ ಕಾರ್ಯದಲ್ಲಿ ನಿರತರಾ ದರು. ಒಂದು ತಂಡ ಬೆಂಕಿಯನ್ನು ನಿಯಂತ್ರಿಸಲು ಮುಂದಾದರೆ, ಇನ್ನೊಂದು ತಂಡ 10 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕೆಳಕ್ಕೆ ಕರೆತಂದಿತು. ಶಾಲಾ ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇತ್ತ ಬೆಂಕಿಯೂ ನಿಯಂತ್ರಣಕ್ಕೆ ಬಂತು. ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ನಿರಾತಂಕರಾದರು.

ADVERTISEMENT

ಗಾಬರಿ ಆಗಬೇಡಿ. ಇದು ನಗರದ ರೊಸಾರಿಯೊ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಅಣಕು ಕಾರ್ಯಾಚರಣೆಯ ಚಿತ್ರಣವಷ್ಟೇ. ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಅಣಕು ಕಾರ್ಯಾಚರಣೆಯ ಮೂಲಕ ವಿದ್ಯಾರ್ಥಿಗಳಿಗೆ ಸಂಕಷ್ಟ ಸ್ಥಿತಿಯನ್ನು ನಿಭಾಯಿಸುವ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ ಶಿವಶಂಕರ, ಗೃಹರಕ್ಷಕ ದಳ, ಅಗ್ನಿಶಾಮಕ ಸೇವೆಯ ಪೊಲೀಸ್ ಮಹಾನಿರ್ದೇಶಕರ ಸುತ್ತೋಲೆಯಂತೆ ಈ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.