ADVERTISEMENT

ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ: ಬೆಳ್ತಂಗಡಿ: 1000 ಕಾರ್ಯಕರ್ತರು ಬೆಂಗಳೂರಿಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 6:38 IST
Last Updated 29 ಜನವರಿ 2018, 6:38 IST

ಬೆಳ್ತಂಗಡಿ : ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಅಭಿವೃದ್ದಿ ನಡೆದಿಲ್ಲ.  ಅರ್ಜಿಗಳು ವಿಲೇವಾರಿಯಾಗದೆ ಬಾಕಿಯಾಗಿವೆ. ಇದೀಗ ಚುನಾವಣೆ ವೇಳೆ ಜನರನ್ನು ಮರುಳುಗೊಳಿಸಲು ಶಿಲಾನ್ಯಾಸ ನೆಪದಲ್ಲಿ ತೆಂಗಿನಕಾಯಿ ಒಡೆಯುವುದರಲ್ಲಿ ಬೆಳ್ತಂಗಡಿ ಶಾಸಕರು ನಿರತರಾಗಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಆರೋಪಿಸಿದರು.

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ  ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಜಿಲ್ಲೆಯ ಉಸ್ತುವಾರಿ ಸಚಿವರು ಅಲ್ಲಾಹುನ ಹೆಸರಲ್ಲಿ ಗೆಲುವು ಸಾಧಿಸವುದಾಗಿ ಹೇಳುತ್ತಿದ್ದಾರೆ. ಸಚಿವ ಯು.ಟಿ ಖಾದರ್ ಅವರು ನಟೋ ರಿಯಸ್‍ಗಳ ಜೊತೆ ಫೋಟೋ ತೆಗೆದುಕೊಂಡು ಪಿಎಫ್‍ಐ, ಎಸ್‍ಡಿಪಿಐ, ಕೆಎಫ್‍ಡಿಯಂತಹ ಸಂಘಟನೆಗಳನ್ನು ಬೆಳೆಸುತ್ತಿದ್ದಾರೆ. ಬಿಜೆಪಿ ಇಂತಹ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸುತ್ತಿದೆ. ಇವರ ಮನಸ್ಥಿತಿ ನೋಡಿದರೆ ಮುಸ್ಲೀಮರ ಮತದಿಂದ ಮಾತ್ರ ಗೆಲ್ಲಲು ಸಾಧ್ಯ ಎನ್ನುವಂತಿದೆ’ ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯೆಡಿಯೂರಪ್ಪ 224ಕ್ಷೇತ್ರಗಳ ಪೈಕಿ 223ಕ್ಷೇತ್ರಗಳಲ್ಲಿ 9,440 ಕಿ.ಮೀ ಯಾತ್ರೆ ಮಾಡಿದ್ದಾರೆ. ಇದರಲ್ಲಿ 2.5ಕೋಟಿ ಜನ ಭಾಗವಹಿಸಿದ್ದಾರೆ. ಬಿಜೆಪಿ ಪರಿವರ್ತನಾ ಯಾತ್ರೆ ಫೆ.4ರಂದು ಸಮಾರೋಪ ಇದ್ದು, ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಆಗಮಿಸುವರು. ರಾಜ್ಯದ 54ಲಕ್ಷ ಬೂತ್‌ಗಳಿಂದ ಕಾರ್ಯಕರ್ತರು ಆಗಮಿಸಲಿದ್ದು ಪ್ರತೀ ತಾಲ್ಲೂಕಿನಿಂದ 1000 ಕಾರ್ಯಕರ್ತರು ಬೆಂಗಳೂರಿಗೆ ಹೋಗಲಿದ್ದು ಸುಮಾರು 5ಲಕ್ಷಕ್ಕಿಂತ ಅಧಿಕ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ’ ಎಂದರು.

ADVERTISEMENT

ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ ಗೌಡ, ರಾಜ್ಯ ಚುನಾವಣಾ ಉಸ್ತುವಾರಿ ಶೈಲಜಾ ಭಟ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ರೈ, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ್, ಭಾಗೀರಥಿ ಮುರಳ್ಯ, ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.