ಮಂಗಳೂರು: ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ನಗರಕ್ಕೆ ಬಂದ 7 ಜನರ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಕ್ರಮವಾಗಿ ಮಂಗಳೂರು ಪ್ರವೇಶಿಸಿದ ಯಾಕೂಬ್ ಮತ್ತು ಆತನ ಕುಟುಂಬದ ಆರು ಜನರನ್ನು ಬಂಧಿಸಿ, ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಈತನಿಗೆ ತಲಪಾಡಿಗೆ ಬರಲು ಹಾಗೂ ಗಡಿ ದಾಟಲು ಸಹಾಯ ಮಾಡಿದ ಶಾಕೀರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ತಡೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಧಿಸಿದ ಆದೇಶವನ್ನು ಉಲ್ಲಂಘಿಸಿದ್ದರಿಂದ ಯಾಕೂಬ್ ಹಾಗೂ ಉಳಿದ ಆರು ಮಂದಿಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇವರನ್ನು 14 ದಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಲಾಕ್ಡೌನ್ ಸಂಬಂಧ ಕರ್ನಾಟಕ- ಕೇರಳ ಗಡಿ ಬಂದ್ ಆಗಿದ್ದು, ಈ ಏಳು ಜನರು ದೋಣಿ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರು ಪ್ರವೇಶಿಸಿ ಅಡ್ಡೂರು ತಲುಪಿದ್ದರು. ದೋಣಿ ಮತ್ತು ಏಳು ಜನರನ್ನು ಮಂಗಳೂರು ತಲುಪಿಸಿದವರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಇವರಿಗೆ ಸಹಾಯ ಮಾಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.