
ಸಾಂದರ್ಭಿಕ ಚಿತ್ರ
ಉಳ್ಳಾಲ: ಸೋಮೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮಹಿಳೆಯೊಬ್ಬರನ್ನು ಜೀವರಕ್ಷಕರೊಬ್ಬರು 1 ಕಿ.ಮಿ. ದೂರದಿಂದ ಓಡಿ ಬಂದು ನೀರಿನಿಂದ ಮೇಲಕ್ಕೆತ್ತಿದರೂ. ಸಕಾಲದಲ್ಲಿ ಆಮ್ಲಜನಕ ಸಿಗದೆ ಆಕೆ ಕೊನೆಯುಸಿರೆಳೆದರು.
ಸಮುದ್ರದಿಂದ ಮೇಲಕ್ಕೆತ್ತಿದ ಬಳಿಕವೂ ಸುಮಾರು 1 ಗಂಟೆ ಮಹಿಳೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಆಂಬುಲೆನ್ಸ್ ಸ್ಥಳಕ್ಕೆ ತಲುಪುವಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಸುಮಾರು 50 ವರ್ಷದ ಮಹಿಳೆ ಸೋಮೇಶ್ವರ ಸಮುದ್ರತೀರದಲ್ಲಿ ರುದ್ರಪಾದೆ ಬಳಿ ಸ್ನಾನ ಮಾಡುತ್ತಿದ್ದಾಗ, ಭಾರಿ ಅಲೆಗೆ ಸಿಲುಕಿ ಸಮುದ್ರಪಾಲಾಗಿದ್ದರು. ಸ್ಥಳದಲ್ಲಿದ್ದವರು ಬೊಬ್ಬಿಟ್ಟಿದ್ದರು. ವಿಷಯ ತಿಳಿದು ಜೀವರಕ್ಷಕ ಅಶೋಕ್ ತಕ್ಷಣವೇ 1 ಕಿ.ಮೀ ದೂರದ ಮನೆಯಿಂದ ಓಡಿಕೊಂಡೇ ರುದ್ರಪಾದೆಯತ್ತ ಧಾವಿಸಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ಸಮುದ್ರ ತೀರಕ್ಕೆ ತಂದಿದ್ದರು. ಅಲ್ಲಿಂದ ಮತ್ತೆ ದೇವಸ್ಥಾನ ಬಳಿ ಒಬ್ಬರೇ ಮೆಟ್ಟಿಲುಗಳನ್ನು ಹತ್ತಿ ಎತ್ತಿಕೊಂಡು ರಸ್ತೆಯವರೆಗೂ ತಂದಿದ್ದರು.
ಘಟನೆ ನಡೆದ ತಕ್ಷಣವೇ ಉಳ್ಳಾಲ ಠಾಣೆಯ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ ಗೆ ಸ್ಥಳೀಯರು ಕರೆ ಮಾಡಿದ್ದರು. ಸ್ಥಳಕ್ಕೆ ಆಂಬ್ಯುಲೆನ್ಸ್ ವಾಹನ ಹಾಗೂ ಪೊಲೀಸರು ತಲುಪುವಾಗ 1 ಗಂಟೆ ವಿಳಂಬವಾಗಿತ್ತು. ಮಹಿಳೆಯ ಗುರುತು ಮತ್ತು ವಿಳಾಸ ತಿಳಿದುಬಂದಿಲ್ಲ.
ಸೋಮೇಶ್ವರದಲ್ಲಿ ಸಮುದ್ರದ ಕಿನಾರೆಯಲ್ಲಿ ಜೀವರಕ್ಷಣೆ ಮಾಡಬಲ್ಲ ಯುವಕರಿದ್ದಾರೆ. ಆದರೆ, ಜೀವರರಕ್ಷಿಸುವ ಪರಿಕರಗಳಿಲ್ಲ. ಈ ಬಗ್ಗೆ ಜಿಲ್ಲಾಡಳಿತ ತುರ್ತು ಕ್ರಮಕೈಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.