ADVERTISEMENT

ಧರ್ಮಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಇಂದು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 17:14 IST
Last Updated 4 ಏಪ್ರಿಲ್ 2020, 17:14 IST
ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ   

ಉಜಿರೆ: ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಭಾನುವಾರ ರಾತ್ರಿ 9 ಗಂಟೆಗೆ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜ್ಯೋತಿ ಬೆಳಗಿಸಿ, ವಿಶೇಷ ಪ್ರಾರ್ಥನೆ ಮಾಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಕೊರೊನಾ ನಿರ್ಮೂಲನೆಗಾಗಿ ನಾವೆಲ್ಲ ವಿಶ್ವದ ಎಲ್ಲ ಜನರೊಂದಿಗೆ ಏಕತೆ, ಸಂಘಟನೆ ಮತ್ತು ಪ್ರಜ್ಞೆಯೊಂದಿಗೆ ಹೋರಾಟ ನಡೆಸುತ್ತಿದ್ದೇವೆ. ಪ್ರಧಾನಿಯವರ ಸಲಹೆಯಂತೆ ಎಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ ತಮ್ಮ ಮನೆಯಲ್ಲಿ ಜ್ಯೋತಿ ಬೆಳಗಿಸಿ, ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವದ ಎಲ್ಲ ಜನರ ನೆಮ್ಮದಿ ಮತ್ತು ಉಜ್ವಲ ಭವಿಷ್ಯದೊಂದಿಗೆ ಸುಖ-ಶಾಂತಿಗಾಗಿ ಪ್ರಾರ್ಥಿಸೋಣ. ಜ್ಯೋತಿಗೆ ಬಡವ-ಬಲ್ಲಿದ, ಮೇಲು-ಕೀಳು ಅಥವಾ ಪ್ರಾದೇಶಿಕ ಭೇದ ಇಲ್ಲ. ಇತರರ ಸಂತೋಷವನ್ನು ನಾವೆಲ್ಲರೂ ಹಂಚಿಕೊಂಡು ಅನುಭವಿಸೋಣ’ ಎಂದು ಹೇಳಿದ್ದಾರೆ.

‘ಜ್ಯೋತಿ ಪ್ರತಿಯೊಬ್ಬರ ಮನದ ಹಾಗೂ ಮನೆಯ ಕತ್ತಲನ್ನು ಹೋಗಲಾಡಿಸಿ ವಿಶ್ವಶಾಂತಿಗೆ ಪ್ರೇರಕವಾಗಲಿ. ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಲಿ ಎಂದು ಎಲ್ಲರೂ ಏಕಕಾಲದಲ್ಲಿ ಪ್ರಾರ್ಥಿಸೋಣ’ ಎಂದು ಸಲಹೆ ನೀಡಿದ್ದಾರೆ.

ADVERTISEMENT

‘ಎಲ್ಲರೂ ಪ್ರಧಾನಿಯವರ ಕರೆಯನ್ನು ಪ್ರೀತಿಯಿಂದ ಸ್ವಾಗತಿಸಿ, ಅನುಷ್ಠಾನಗೊಳಿಸಿ ಆನಂದಿಸೋಣ. ಕೊರೊನಾ ಶೀಘ್ರ ನಿರ್ಮೂಲನೆಯಾಗಿ ವಿಶ್ವದೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲಿ’ ಎಂದು ಅವರು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.