ಮಂಗಳೂರು: ವಸತಿ ನಿಲಯಗಳನ್ನು ಪ್ರಾರಂಭಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ, ಎಬಿವಿಪಿ ಘಟಕದ ಕಾರ್ಯಕರ್ತರು ನಗರದ ಮಿನಿ ವಿಧಾನ ಸೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ರಾಜ್ಯದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ವಸತಿನಿಲಯಗಳ ಅವಲಂಬಿತರಾಗಿ ಇರುವುದರಿಂದ ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ವ್ಯಾಪ್ತಿಯ ಬರುವ ಎಲ್ಲ ವಸತಿನಿಲಯಗಳನ್ನು ತೆರೆಯಬೇಕು. ವಸತಿನಿಲಯಗಳನ್ನು ಸ್ಯಾನಿಟೈಸ್ ಮಾಡಿ ವಿದ್ಯಾರ್ಥಿಗಳಿಗೆ ಉಳಿಯಲು ಅವಕಾಶ ಮಾಡಿಕೊಡಬೇಕು ಎಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.
ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಘಟಕದ ಸಹಕಾರ್ಯದರ್ಶಿ ಮಣಿಕಂಠ ಕಳಸ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ದೀಪ್ತಿ ಯೋಗೇಶ್, ತಾಲ್ಲೂಕು ಸಂಚಾಲಕ ನಿಶಾನ್ ಆಳ್ವ, ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ಪ್ರಮುಖರಾದ ಶ್ರೀಲಕ್ಷ್ಮಿ, ಆತ್ಮಿಕ, ಆದಿತ್ಯ ಶೆಟ್ಟಿ, ಶ್ರೀಪಾದ್ ತಂತ್ರಿ, ಆದರ್ಶ್, ಭವನೀಶ್ ಶೆಟ್ಟಿ, ಸಂಜನ್, ಕೀರ್ತನ್, ಸುಶಾಂತ್, ಪ್ರಸಿದ್ಧ್, ಚೇತನ್, ನಿಶಾ, ವೈಷ್ಣವಿ, ನೀಲೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.