ಮಂಗಳೂರು: ಗಾಳಿ– ಮಳೆಗೆ ಜಾಹೀರಾತು ಫಲಕಗಳು ಕುಸಿದು ಬಿದ್ದು ಜೀವ ಹಾನಿಯಾಗುವ ಸಾಧ್ಯತೆಗಳು ಇರುವುದರಿಂದ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಫಲಕಗಳ ಸುಸ್ಥಿತಿಯ ಬಗ್ಗೆ ಕಟ್ಟಡ ವಿನ್ಯಾಸಕಾರರಿಂದ ತಪಾಸಣೆಗೆ ಒಳಪಡಿಸಿ ಮೂರು ದಿನಗಳೊಳಗಾಗಿ ಸುರಕ್ಷತಾ ವರದಿ ಸಲ್ಲಿಸಲು ಮಹಾನಗರ ಪಾಲಿಕೆ ಸೂಚಿಸಿದೆ.
ಎಲ್ಲೆಡೆ ನಿರಂತರ ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರಿ ಗಾಳಿ– ಮಳೆಯಾಗುವ ಬಗ್ಗೆ ಹವಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ. ಗಾಳಿ ಮಳೆಗೆ ಅಪಾಯಕಾರಿ ಜಾಹೀರಾತು ಫಲಕಗಳು ಕುಸಿದು ಬಿದ್ದು, ಜೀವ ಹಾನಿಯಾಗುವ ಸಾಧ್ಯತೆ ಇರುವುದರಿಂದ ಸುರಕ್ಷತಾ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಖಾಸಗಿ ಜಾಗಗಳಲ್ಲಿ ಮತ್ತು ಕಟ್ಟಡಗಳ ಮೇಲೆ ಅಳವಡಿಸಿರುವ ಜಾಹೀರಾತು ಫಲಕಗಳ ಸುಸ್ಥಿತಿಯ ಬಗ್ಗೆ ಸಂಬಂಧಪಟ್ಟ ಕಟ್ಟಡ ಮಾಲಕರು ಕಟ್ಟಡ ವಿನ್ಯಾಸಕಾರರಿಂದ ತಪಾಸಣೆಗೆ ಒಳಪಡಿಸಿ, ವರದಿ ಸಲ್ಲಿಸಬೇಕು. ವರದಿ ಸಲ್ಲಿಸದೆ ಇದ್ದಲ್ಲಿ, ಫಲಕಗಳು ಬಿದ್ದು ಆಸ್ತಿಪಾಸ್ತಿ, ವಾಹನಗಳಿಗೆ ಹಾನಿ, ಜೀವಹಾನಿ ಸಂಭವಿಸಿದಲ್ಲಿ ಕಟ್ಟಡ ಮಾಲೀಕರನ್ನು ನೇರ ಹೊಣೆಗಾರನ್ನಾಗಿ ಮಾಡಿ, ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.