ADVERTISEMENT

ಮಂಗಳೂರು ಗೋಲಿಬಾರ್: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಧರಣಿ

2ನೇ ಸ್ವಾತಂತ್ರ್ಯ ಹೋರಾಟ: ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 9:09 IST
Last Updated 2 ಜನವರಿ 2020, 9:09 IST
ಮಂಗಳೂರಿನಲ್ಲಿ ವಿವಿಧ ಜಾತ್ಯತೀತ ಸಂಘಟನೆಗಳ ಸದಸ್ಯರು ಗುರುವಾರ ಧರಣಿ ನಡೆಸಿದರು.
ಮಂಗಳೂರಿನಲ್ಲಿ ವಿವಿಧ ಜಾತ್ಯತೀತ ಸಂಘಟನೆಗಳ ಸದಸ್ಯರು ಗುರುವಾರ ಧರಣಿ ನಡೆಸಿದರು.   

ಮಂಗಳೂರು: ದೇಶದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು, ಇದರ ವಿರುದ್ಧ ಜಾತ್ಯತೀತ ಸಂಘಟನೆಗಳು ಒಟ್ಟಾಗಿ 2ನೇ ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ನಗರದ ಟೌನ್ ಹಾಲ್ ಬಳಿ ಗುರುವಾರ ಹಮ್ಮಿಕೊಂಡಿದ್ಧ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಈ ಹೋರಾಟಕ್ಕೆ ಜನರೇ ಬುನಾದಿಯಾಗಿದ್ದು, ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಬೇಕು ಎಂದರು.

ಮಂಗಳೂರಿನಲ್ಲಿ ನಡೆದ‌ ಘಟನೆಗಳಿಗೆ ಯಾರು ಕಾರಣ? ತಪ್ಪಿತಸ್ಥರು ಯಾರು ಎಂಬುದು ಸ್ಪಷ್ಟವಾಗಬೇಕಾದರೆ, ನ್ಯಾಯಾಂಗ ತನಿಖೆ ನಡೆಸುವುದು ಅಗತ್ಯವಾಗಿದೆ. ಈ ಘಟನೆಯ ಹಿಂದೆ ಕಾಂಗ್ರೆಸ್ ಇದೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ಸತ್ಯ ಹೊರಗೆ ಬರಬೇಕಾದರೆ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮಂಗಳೂರು ಘಟನೆ ಸರ್ಕಾರದ ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದ ಅವರು, ನಮ್ಮ ಹೋರಾಟ ಅಧಿಕಾರಶಾಹಿ ವಿರುದ್ಧವಲ್ಲ. ಬದಲಾಗಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧವಾಗಿದೆ ಎಂದರು.

ನೋಟು ರದ್ದತಿಯ ಸಂದರ್ಭದಲ್ಲಿ ಎಟಿಎಂಗಳ ಎದುರು ಸರದಿಯಲ್ಲಿ ನಿಂತವರ‌ ಪೌರತ್ವ ಪ್ರಶ್ನಿಸುವುದು ಅವಮಾನ. ದೇಶದ ಪೌರರಲ್ಲದವರ ಮೇಲೆ ಕ್ರಮ ಕೈಗೊಳ್ಳಿ.‌ ಅದನ್ನು ಬಿಟ್ಟು ರಾಜ್ಯದ 6 ಕೋಟಿ‌ ಜನರ ಪೌರತ್ವ ಪ್ರಶ್ನಿಸುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.