ಮಂಗಳೂರು: ಹಸಿರುದಳ ಮತ್ತು ಎಪಿಡಿ ಪ್ರತಿಷ್ಠಾನವು ಉಳ್ಳಾಲದಲ್ಲಿ ಜಿಲ್ಲೆಯ ಮೊದಲ ಒಣ ತ್ಯಾಜ್ಯ ಸಂಗ್ರಹ ಕೇಂದ್ರವನ್ನು (ಡಿಡಬ್ಲ್ಯೂಸಿಸಿ) ಸ್ಥಾಪಿಸಲು ಉಳ್ಳಾಲ ನಗರ ಸಭೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಉಳ್ಳಾಲ ನಗರಸಭೆ ಪೌರಾಯುಕ್ತ ರಾಯಪ್ಪ ಒಪ್ಪಂದಕ್ಕೆ ಸಹಿ ಹಾಕಿದರು.
ಒಪ್ಪಂದದ ಷರತ್ತುಗಳ ಪ್ರಕಾರ, ಮೊಹಮ್ಮದ್ ನವಾಜುದ್ದೀನ್ ಎಂಬ ತ್ಯಾಜ್ಯ ವಿಂಗಡಕ (ಸಾರ್ಟರ್) ಅನ್ನು ಆಪರೇಟರ್ ಎಂದು ಗುರುತಿಸಲಾಗಿದೆ. ಹಸಿರುದಳ ಮತ್ತು ಎಪಿಡಿ ಪ್ರತಿಷ್ಠಾನವು ಯೋಜನೆಯ ಸಂಯೋಜಕ ಎಂದು ಗುರುತಿಸಲಾಗಿದೆ.
ಮರುಬಳಕೆ ಮಾಡಬಹುದಾದ ಒಣ ತ್ಯಾಜ್ಯವನ್ನು ಸಂಗ್ರಹಿಸಲು, ಸಂಸ್ಕರಿಸಲು ಮತ್ತು ಸಂಗ್ರಹಿಸಲು ಉಳ್ಳಾಲ ನಗರ ಸಭೆ ಭೌತಿಕ ಮೂಲಸೌಕರ್ಯ ಒದಗಿಸಲಿದೆ. ಹಸಿರುದಳ ಮತ್ತು ಎಪಿಡಿ ಪ್ರತಿಷ್ಠಾನವು ತಾಂತ್ರಿಕತೆಯನ್ನು ಒದಗಿಸಲಿದ್ದು, ಯೋಜನೆಯ ತರಬೇತಿ ಮತ್ತು ಮೇಲ್ವಿಚಾರಣೆಯನ್ನು ಕೈಗೊಳ್ಳಲಿದೆ. ಮೊಹಮ್ಮದ್ ನವಾಜುದ್ದೀನ್ ಮತ್ತು ಅವರ ಇಬ್ಬರು ವಿಂಗಡಕರ ತಂಡವು ಡಿಡಬ್ಲ್ಯೂಸಿಸಿ ಘಟಕದ ನಿತ್ಯದ ವ್ಯವಹಾರವನ್ನು ನಿರ್ವಹಿಸಲಿದೆ.
ಡಿಡಬ್ಲ್ಯೂಸಿಸಿ ಘಟಕವು ಶುಕ್ರವಾರದಿಂದ ಉಳ್ಳಾಲದಲ್ಲಿ ಕಾರ್ಯ ಆರಂಭಿಸಿದೆ. ಈ ಒಪ್ಪಂದವು ಮೂರು ವರ್ಷಗಳ ಅವಧಿಗೆ ಅನ್ವಯಿಸಲಿದ್ದು, ನಂತರ ಅದನ್ನು ನವೀಕರಿಸಬಹುದಾಗಿದೆ.
4–5 ಟನ್ ಒಣ ತ್ಯಾಜ್ಯ ಸೇರಿದಂತೆ ಉಳ್ಳಾಲದಲ್ಲಿ ದಿನಕ್ಕೆ 18 ಟನ್ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಉಳ್ಳಾಲ ನಗರ ಸಭೆಯೊಂದಿಗೆ 10 ತಿಂಗಳ ಅಧ್ಯಯನ ಮಾಡಿದ ನಂತರ ಮತ್ತು ಸದ್ಯದ ಘನತ್ಯಾಜ್ಯ ನಿರ್ವಹಣೆ ಅನ್ನು ಅರ್ಥಮಾಡಿಕೊಂಡ ನಂತರ ಹಸಿರುದಳ ಮತ್ತು ಎಪಿಡಿ ಪ್ರತಿಷ್ಠಾನ ಡಿಡಬ್ಲ್ಯೂಸಿಸಿ ಯೋಜನೆಯನ್ನು ಸಿದ್ಧಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.