ಸುಳ್ಯ: ಅಡಿಕೆಗೆ ಬಾಧಿಸುವ ಹಳದಿ ಎಲೆ ರೋಗ ಮತ್ತು ಎಲೆಚುಕ್ಕಿ ರೋಗದ ಕುರಿತ ಅಧ್ಯಯನ ನಡೆಸುವ ವೈಜ್ಞಾನಿಕ ಸಮಿತಿ ಸದಸ್ಯರು ತಾಲ್ಲೂಕಿನ ಮರ್ಕಂಜ ಮತ್ತು ರೆಂಜಾಳದ ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳಿಗೆ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕೇಂದ್ರ ಮಟ್ಟದ ಸಮಿತಿಯು ಎಲೆ ಚುಕ್ಕೆ ರೋಗ ಮತ್ತು ಹಳದಿ ಎಲೆ ರೋಗ ಕುರಿತು ಮಾಹಿತಿ ಸಂಗ್ರಹಿಸಿ, ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಭಾನುವಾರ ಮರ್ಕಂಜದ ಮಾಪಲತೋಟ , ಬಲ್ಕಾಡಿಮತ್ತು ದಾಸರ ಬೈಲು ಪ್ರದೇಶದ ಕೃಷಿಕರ ತೋಟಕ್ಕೆ ಭೇಟಿ ನೀಡಿದ ತಂಡವು ಅಡಿಕೆ ಸೋಗೆ, ಅಡಿಕೆ ಮರ ಹಾಗೂ ಅಡಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗ ಎರಡೂ ಒಂದೇ ತೋಟದಲ್ಲಿ ಇದ್ದಾಗ ಅವುಗಳನ್ನು ಪ್ರತ್ಯೇಕಿಸಿ ಗುರುತಿಸಲು ಕಷ್ಟವಾಗುವುದರ ಬಗ್ಗೆ ಕೃಷಿಕರೂ ಮಾಹಿತಿ ನೀಡಿದರು.
ಸಿ. ಪಿ.ಸಿ ಆರ್.ಐ., ಕಾಸರಗೋಡಿನ ಪ್ರಭಾರ ನಿರ್ದೇಶಕ ಡಾ. ಮುರಳೀಧರನ್, ಕಲ್ಲಿಕೋಟೆಯ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೆರಿಯನ್, ಸಿ.ಪಿ.ಸಿ.ಆರ್.ಐ. ಕಾಸರಗೋಡಿನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಹೆಗ್ಡೆ, ತೋಟಗಾರಿಕೆ ಉಪ ನಿರ್ದೇಶಕ ಡಾ. ಎಚ್. ಆರ್. ನಾಯ್ಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.