ADVERTISEMENT

ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣ: 8 ಮಂದಿ ಆರೋಪಿಗಳ ಬಂಧನ

ಗೋಲಿಬಾರ್‌ಗೆ ಪ್ರತೀಕಾರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 9:21 IST
Last Updated 19 ಜನವರಿ 2021, 9:21 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗೆ ಡಿಸೆಂಬರ್‌16ರಂದು ಮಧ್ಯಾಹ್ನ ತಲವಾರು ದಾಳಿ ನಡೆಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. 2019ರ ಡಿಸೆಂಬರ್ 19ರಂದು ನಡೆದ ಮಂಗಳೂರು ಗೋಲಿಬಾರ್‌ಗೆ ಪ್ರತೀಕಾರವಾಗಿ ಈ‌ ಕೃತ್ಯ ಎಸಗಿರುವ ಮಾಹಿತಿ‌ ದೊರೆತಿದೆ‌. ಈ ಸಂಬಂಧ8ಮಂದಿಯನ್ನು ಬಂಧಿಸಲಾಗಿದೆ.

ಮಂಗಳೂರಿನ ಬಂದರು ಠಾಣಾ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಗಣೇಶ್ ಕಾಮತ್ ಹಾಗೂ ಮಹಿಳಾ ಸಿಬ್ಬಂದಿ ನಗರದ ನ್ಯೂಚಿತ್ರ ಸರ್ಕಲ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಬೈಕ್‌ನಿಂದ ಇಳಿದು ಪೊಲೀಸರು ಕುಳಿತಲ್ಲಿಗೆ ಹೋಗಿ ಗಣೇಶ್ ಕಾಮತ್ ಮೇಲೆ ತಲವಾರಿನಿಂದ ದಾಳಿ ನಡೆಸಿ ಬೈಕ್‌ ಏರಿ ಪರಾರಿಯಾಗಿದ್ದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್‌ ಆಯುಕ್ತ ಶಶಿಕುಮಾರ್, ಗೊಲೀಬಾರ್‌ನಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನದ ಹಿನ್ನೆಲೆ ಪೊಲೀಸರ ಮೇಲೆ ಕೊಲೆ ಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, 16ವರ್ಷದ ಬಾಲಕನೊಬ್ಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದರು.

ADVERTISEMENT

ಬಂಟ್ವಾಳ ನಿವಾಸಿ ಮಹಮ್ಮದ್ ನವಾಝ್ (30), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (22), ಕುದ್ರೋಳಿ ನಿವಾಸಿ ಅಬ್ದುಲ್ ಖಾದರ್ ಫಹಾದ್ (23), ಬಜ್ಪೆ ನಿವಾಸಿ ಶೇಖ್ ಮಹಮ್ಮದ್ ಹ್ಯಾರಿಸ್ ಯಾನಿ ಜಿಗ್ರಿ (31), ಕುದ್ರೋಳಿ ನಿವಾಸಿ ರಾಹಿಲ್ ಯಾನೆ ಚೋಟು ರಾಹಿಲ್ (18),ತಣ್ಣೀರು ಬಾವಿ ನಿವಾಸಿ ಮಹಮ್ಮದ್ ಖಾಯೀಸ್ (24) ಬಂಧಿತರು.ಇನ್ನಿಬ್ಬರನ್ನು ಇದಕ್ಕೂ ಮುನ್ನ ಬಂಧಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.