ADVERTISEMENT

ಭವಿಷ್ಯ ಹೇಳಿದವರಿಗೆ ₹ 1 ಲಕ್ಷ ಬಹುಮಾನ: ನರೇಂದ್ರ ನಾಯಕ್ ಸವಾಲು

​ಪ್ರಜಾವಾಣಿ ವಾರ್ತೆ
Published 26 ಮೇ 2022, 16:10 IST
Last Updated 26 ಮೇ 2022, 16:10 IST

ಮಂಗಳೂರು: ಭೂತಕಾಲ ಮತ್ತು ಭವಿಷ್ಯದ ಬಗ್ಗೆ ನಿಖರವಾಗಿ ಹೇಳಬಲ್ಲ, ವಿಶೇಷ ಶಕ್ತಿಯನ್ನು ಹೊಂದಿರುವವರಿಗೆ ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್, ₹ 1 ಲಕ್ಷ ಬಹುಮಾನ ಘೋಷಿಸಿದ್ದಾರೆ.

ಮಳಲಿ ಮಸೀದಿಗೆ ವಿವಾದಕ್ಕೆ ಸಂಬಂಧಿಸಿ ಜ್ಯೋತಿಷಿಯೊಬ್ಬರು ಗತಕಾಲದ ಬಗ್ಗೆ ವೀಳ್ಯದೆಲೆ ಮೂಲಕ ಭವಿಷ್ಯ ಹೇಳಿರುವ ಹಿನ್ನೆಲೆಯಲ್ಲಿ ಅತಿಮಾನುಷ ಶಕ್ತಿ ಹೊಂದಿರುವವರು ಸವಾಲನ್ನು ಎದುರಿಸಿ ಬಹುಮಾನವನ್ನು ಪಡೆಯುವಂತೆ ಫೇಸ್‌ಬುಕ್‌ನಲ್ಲಿ ಅವರು ಆಹ್ವಾನ ನೀಡಿದ್ದಾರೆ.

‘ಮಳಲಿಯಲ್ಲಿ ವೀಳ್ಯದೆಲೆಯ ಮೂಲಕದ ಭವಿಷ್ಯವು ಊಹೆ ಅಥವಾ ಸ್ಥಿರ ಫಲಿತಾಂಶವಾಗಿರಬಹುದು. ಇಂತಹ ವ್ಯಕ್ತಿಗಳ ಶಕ್ತಿಯನ್ನು ಪರೀಕ್ಷಿಸಲು ನಾವು, ಈ ಪ್ರಕಟಣೆ ಪ್ರಕಟಗೊಳ್ಳುವ ವೇಳೆಗೆ ಭವಿಷ್ಯವನ್ನು ತಿಳಿಸಬೇಕಾದ ವಸ್ತುಗಳನ್ನು ಆರು ಪ್ರತ್ಯೇಕ ಕವರ್‌ಗಳಲ್ಲಿ ಹಾಕಿ, ಲಕೋಟೆಯೊಂದರಲ್ಲಿ ಮೇ 26ರ 11.33ಕ್ಕೆ ಸೀಲ್ ಮಾಡಲಾಗಿದೆ. ಅದನ್ನು ಜೂನ್ 1ರಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಳಗ್ಗೆ 10.30ಕ್ಕೆ ತೆರೆಯಲಾಗುವುದು. ಅಲ್ಲಿಯೇ ಬಹುಮಾನವನ್ನು ಘೋಷಿಸಲಾಗುವುದು’ ಎಂದಿದ್ದಾರೆ.

ADVERTISEMENT

ಈ ಸವಾಲು ಧಾರ್ಮಿಕ ನಂಬಿಕೆಗಳು, ಜಾತಿ, ಪಂಥ, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿದೆ. ಆಸಕ್ತರು ತಮ್ಮ ಉತ್ತರಗಳನ್ನುnarenyen@gmail.comಗೆ ಇಮೇಲ್ ಅಥವಾ 9448216343 ಮೊಬೈಲ್ ಸಂಖ್ಯೆಗೆ ವಾಟ್ಸ್ಆ್ಯಪ್ ಮಾಡಬಹುದು. ಮೇ 31ರ ಮಧ್ಯರಾತ್ರಿವರೆಗೆ ಕಳುಹಿಸಲಾಗುವ ಎಲ್ಲ ಉತ್ತರಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚಿನ ಮಂದಿ ಉತ್ತರ ನೀಡಿದರೂ ಪ್ರತಿಯೊಬ್ಬರಿಗೂ ತಲಾ ₹ 1 ಲಕ್ಷ ಬಹುಮಾನ ದೊರೆಯಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.