ಮಂಗಳೂರು: ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ ಸೇರಿದಂತೆ ತುಳುನಾಡಿನ ವೈಶಿಷ್ಟ್ಯತೆಗಳನ್ನು ವ್ಯವಸ್ಥಿತವಾಗಿ ದಾಖಲಿಸುವ ಕಾರ್ಯ ಆಗಬೇಕಾಗಿದ್ದು, ಅದಕ್ಕಾಗಿ ತುಳು ಅಕಾಡೆಮಿಯಿಂದ ‘ದಾಖಲೀಕರಣ ಘಟಕ’ ಸ್ಥಾಪನೆ ಮಾಡುವ ಅವಶ್ಯಕತೆ ಇದೆ ಎಂದು ಜಾನಪದ ವಿದ್ವಾಂಸ ವೈ.ಎನ್.ಶೆಟ್ಟಿ ಅಭಿಪ್ರಾಯ ಪಟ್ಟರು.
ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ತುಳುಭವನದಲ್ಲಿ ನಡೆದ ರಮೇಶ್ ಮಂಜೇಶ್ವರ ನಿರ್ದೇಶನದ ‘ಆಟಿದ ಬೂತಾರಾಧನೆ’ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೈವಾರಾಧನೆ ಹಿಂದೆ ಸರಳವಾಗಿತ್ತು, ಆದರೆ ಈಗ ಅದನ್ನು ಸಂಕೀರ್ಣಗೊಳಿಸಲಾಗಿದೆ ಎಂಬುದನ್ನು ಹಿರಿಯ ದೈವನರ್ತಕರು ಹೇಳುತ್ತಿದ್ದಾರೆ. ದೈವರಾಧನೆಯಲ್ಲಿ ಬದಲಾವಣೆಗಳಾಗುತ್ತ ಬಂದಿವೆ. ಪ್ರಬುದ್ಧ ತುಳುಭಾಷೆ ಯನ್ನು ಪಾಡ್ದನ, ನುಡಿಗಟ್ಟು, ಮದಿಪು ಮೊದಲಾದವುಗಳಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಇಂತಹ ಮೂಲಗಳನ್ನು ಉಳಿಸಿಕೊಳ್ಳಬೇಕಾಗಿದೆ. ಅಕಾಡೆಮಿಯಿಂದ ದಾಖಲೀಕರಣದ ಜತೆಗೆ ಇತರರ ಬಳಿ ಇರುವ ದಾಖಲೆಗಳನ್ನು ಸಂಗ್ರಹಿಸುವ ಕೆಲಸವಾಗಬೇಕು ಎಂದರು.
ಆಟಿದ ಭೂತಾರಾಧನೆ, ನೇಮದ ಬಗ್ಗೆ ಅಭಿಪ್ರಾಯ ಮಂಡಿಸಿದ ಪೆರುವಾಯಿ ಮೂವರು ದೈವಂಗಳು ದೈವಸ್ಥಾನದ ಗುರಿಕಾರ ಸುಬ್ರಹ್ಮಣ್ಯ ಭಟ್ ಕೆ.ಜೆ ಅವರು, ಆಟಿಯಲ್ಲಿ ಕೃಷಿ ಕೆಲಸ ಮುಗಿಯುವ ಕಷ್ಟದ ಕಾಲ, ಬೆಳೆಯನ್ನು ಸಂರಕ್ಷಿಸಲು ಪಂಜುರ್ಲಿ ದೈವಕ್ಕೆ ಪ್ರಾರ್ಥನೆ ಮಾಡಲಾಗುತ್ತಿತ್ತು. ಪೆರುವಾಯಿಯಲ್ಲಿ ಆಟಿಯಲ್ಲಿ ನಡೆಯುವ ದೈವಾರಾಧನೆ ವಿಶಿಷ್ಟವಾಗಿದೆ ಎಂದರು.
ನಿವೃತ್ತ ಕೃಷಿಕ ಎಂ.ಕೆ.ಕುಕ್ಕಾಜೆ ಮಾತನಾಡಿ, ಆಟಿಯಲ್ಲಿ ತುಳುನಾಡಿನ ದೈವ ಘಟ್ಟ ಹತ್ತುತ್ತದೆ ಎಂಬುದು ಸರಿಯಲ್ಲ, ದೈವಗಳು ಒಂದು ಸ್ಥಳದಲ್ಲಿ ನೆಲೆಯಾದ ಅನಂತರ ವಿಧಿ ಪ್ರಕಾರವೇ ಅವುಗಳನ್ನು ಕೊಂಡೊಯ್ಯ ಬೇಕಾಗುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಗಟ್ಟಿ ಮಳಿ, ದೈವರಾಧಕರಾದ ಆನಂದ ನಲಿಕೆ, ಐತಪ್ಪ ಆರಿಕ್ಕಾಡಿ ಕುಂಬಳೆ, ಪೆರುವಾಯಿ ಗುತ್ತಿನ ರಾಜೇಂದ್ರನಾಥ್ ರೈ ಪ್ರತಿಕ್ರಿಯೆ ನೀಡಿದರು. ಸಾಕ್ಷ್ಯಚಿತ್ರದ ನಿರ್ದೇಶಕ ರಮೇಶ್ ಮಂಜೇಶ್ವರ, ತುಳು ಅಕಾಡೆಮಿಯ ಸದಸ್ಯ ಸಂಚಾಲಕ ಬೂಬ ಪೂಜಾರಿ ಮಳಲಿ, ಸದಸ್ಯ ಪಾಂಗಾಳ ಬಾಬು ಕೊರಗ, ಮಾಜಿ ಅಧ್ಯಕ್ಷರಾದ ಎ.ಸಿ ಭಂಡಾರಿ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಸಂತೋಷ್ ರೈ ಹಿರಿಯಡ್ಕ ವಂದಿಸಿದರು.
ತುಳುವಿನ ವೈಶಿಷ್ಟ್ಯತೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವುದಕ್ಕಾಗಿ ಅಕಾಡೆಮಿಯು ದಾಖಲೀಕರಣಕ್ಕೆ ಆದ್ಯತೆ ನೀಡುತ್ತಿದೆ.ತಾರಾನಾಥ್ ಗಟ್ಟಿ ಕಾಪಿಕಾಡ್ ಅಕಾಡೆಮಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.