ಬೆಳ್ತಂಗಡಿ: ‘ಸಾಹಿತ್ಯ, ಕಲೆ, ಸಂಸ್ಕೃತಿಗೆ ಯುವವಾಹಿನಿ ಪ್ರೋತ್ಸಾಹ ನೀಡುತ್ತಿದ್ದು, ಕಲಾವಿದರನ್ನು ಗುರುತಿಸುತ್ತಿದೆ. ಹಿಂದಿನಿಂದ ಬಂದ ಕಲೆ, ಸಂಸ್ಕೃತಿಯಲ್ಲಿ ಹಲವಾರು ನೈಜ ಘಟನೆಗಳು ಇದ್ದು, ಅದನ್ನು ಪ್ರದರ್ಶಿಸುವುದರಿಂದ ಜನರಲ್ಲಿ ಈ ಕುರಿತ ಜಾಗೃತ ಪ್ರಜ್ಞೆ ಮೂಡಲು ಸಹಕಾರಿಯಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಯುವವಾಹಿನಿ ಕೇಂದ್ರ ಸಮಿತಿ ನೇತೃತ್ವ, ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಇಲ್ಲಿನ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಹಯೋಗದಲ್ಲಿ ನಡೆದ ಡೆನ್ನನ - ಡೆನ್ನಾನ 2024ರಲ್ಲಿ ರಂಗಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಹಿಂದೆ ಕೆಲವೇ ಕೆಲವು ವರ್ಗದವರಿಗೆ ಶಿಕ್ಷಣ ಪಡೆಯುವ ಅವಕಾಶ ಇತ್ತು. ಅದರಲ್ಲೂ ಮಹಿಳೆಯರಿಗೆ ಶಿಕ್ಷಣವೇ ಇಲ್ಲದಂತಾಗಿತ್ತು. ಜ್ಯೋತಿಬಾಫುಲೆಯಂಥ ಮಹಾನ್ ವ್ಯಕ್ತಿಗಳಿಂದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು. ಇಂದು ಸರ್ಕಾರಿ ವ್ಯವಸ್ಥೆಯಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಕಟ್ಟಕಡೆಯ ಕುಟುಂಬದ ಮಕ್ಕಳು ಶಿಕ್ಷಣ ಪಡೆದು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಬೇಕು’ ಎಂದರು.
ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ‘ಯುವವಾಹಿನಿ ಉತ್ತಮ ಕಾರ್ಯಕ್ರಮ ಮಾಡುತ್ತಿದ್ದು ಕಲೆ, ಸಂಸ್ಕೃತಿಗೆ ಆಧ್ಯತೆ ನೀಡುವ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು. ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆಗಳಿದ್ದು, ಅದನ್ನು ಬೆಳೆಸುವ ಜವಾಬ್ದಾರಿ ಎಲ್ಲರಲ್ಲಿದೆ’ ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾಶಿವ ಊರ, ಕಾರ್ಯದರ್ಶಿ ಯಶೋಧರ ಮುಂಡಾಜೆ, ಪದ್ಮನಾಭ ಕೊಟ್ಯಾನ್, ಡಾ.ಚಿದಾನಂದ ತೋನ್ಸೆ ಭಾಗವಹಿಸಿದ್ದರು.
ಸಾಧಕ ಕಲಾವಿದ ನರೇಶ್ ಕುಮಾರ್ ಸಸಿಹಿತ್ಲು ಅವರಿಗೆ ಡೆನ್ನಾನ - ಡೆನ್ನಾನ 2024 ಯುವವಾಹಿನಿ ರಂಗಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ರಾಜಾರಾಂ ಕೆ.ವಿ., ಪದ್ಮನಾಭ ಕೊಟ್ಯಾನ್, ವಿನೋದ್ ಮಂಚಿ ಉಡುಪಿ, ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.
ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಎಂ.ಕೆ.ಪ್ರಸಾದ್ ಸ್ವಾಗತಿಸಿ, ಚಂದ್ರಹಾಸ ಬಳಂಜ ಪ್ರಸ್ತಾವಿಸಿದರು. ಪ್ರಜ್ಞಾ ಒಡಿಳ್ನಾಲ, ಸಮೀಕ್ಷ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.
ಡೆನ್ನನ - ಡೆನ್ನಾನ ಶಬ್ದವೇ ತುಳುವರಿಗೆ ರೋಮಾಂಚಕ
ಕಾರ್ಯಕ್ರಮವನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಉದ್ಘಾಟಿಸಿದರು.
‘ತುಳುವರನ್ನು ಜಾತಿ, ಮತ, ಧರ್ಮ ಭೇದವಿಲ್ಲದೇ ಬೆಸೆಯುವ ಶಬ್ದವೇ ಡೆನ್ನನ- ಡೆನ್ನಾನ. ಇದು ತುಳುವರಿಗೆ ರೋಮಾಂಚಕ. ಎಲ್ಲ ಸಮುದಾಯಗಳಿಗೂ ಒಂದು ಸಾಂಸ್ಕೃತಿಕ ಹಿನ್ನೆಲೆ ಇದೆ. ಆದರೆ, ಇಂದು ಸರಿಯಾದ ಆಚರಣೆ ಇಲ್ಲದೆ ನಿರ್ಲಕ್ಷ್ಯದಿಂದ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ’ ಎಂದರು.
ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಹ ಪ್ರಾಧ್ಯಾಪಕ ಡಾ.ಹರ್ಷವರ್ಧನ್, ಮಂಗಳೂರು ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಸಂಘಟನೆಯ ಪ್ರಮುಖರಾದ ಪ್ರಶಾಂತ್ ಮಚ್ಚಿನ, ಹರೀಶ್ ಕಳಿಯ, ಅಶ್ವಥ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.