ADVERTISEMENT

ಸಮೀಕ್ಷೆ: ದೂರ ಉಳಿಯುವವರ ವಿರುದ್ಧ ಕ್ರಮ; ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:20 IST
Last Updated 5 ಅಕ್ಟೋಬರ್ 2025, 6:20 IST
ದರ್ಶನ್ ಎಚ್‌.ವಿ
ದರ್ಶನ್ ಎಚ್‌.ವಿ   

ಮಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ದೂರ ಉಳಿಯುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ಎಚ್ಚರಿಕೆ ನೀಡಿದರು. 

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕು ಒಂದರಲ್ಲೇ 1714 ಮಂದಿಯನ್ನು ಸಮೀಕ್ಷೆಗಾಗಿ ನೇಮಿಸಿದ್ದು ಮನೆಮನೆಗೆ ತೆರಳಿ ಮಾಹಿತಿ ಕಲೆ ಹಾಕಬೇಕು ಎಂದು ಸೂಚಿಸಲಾಗಿದೆ. ಆದರೆ 425 ಮಂದಿ ಇನ್ನೂ ತಮ್ಮ ಕರ್ತವ್ಯ ನಿಭಾಯಿಸಲಿಲ್ಲ. ಇದು ಗಂಭೀರ ಲೋಪ ಎಂದು ಅವರು ಹೇಳಿದ್ದಾರೆ.  

ಸಮೀಕ್ಷೆ ಅ.7ರಂದು ಮುಗಿಯಬೇಕು ಎಂದು ಸರ್ಕಾರ ಸೂಚಿಸಿದೆ. ಗಂಭೀರ ಕಾರಣಗಳು ಇಲ್ಲದೆ ಗೈರು ಹಾಜರಾಗಿರುವವರೆಲ್ಲರೂ ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.  

ADVERTISEMENT

ಸಮಸ್ಯೆ ಬಗೆಹರಿಸಿ:

ಸಮೀಕ್ಷೆಯಲ್ಲಿ ಗೊಂದಲಗಳಿದ್ದು ತೆರಿಗೆಯ ಹಣವನ್ನು ಪೋಲು ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಆದ್ದರಿಂದ ಸರ್ಕಾರ ತಕ್ಷಣ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಆಗ್ರಹಿಸಿದ್ದಾರೆ. 

ಸಮೀಕ್ಷೆಯ ಸಂದರ್ಭದಲ್ಲಿ ಎಲ್ಲ ಮಾಹಿತಿಗಳನ್ನು ನೀಡಲೇಬೇಕು ಎಂದು ಒತ್ತಾಯ ಮಾಡುವಂತಿಲ್ಲ ಎಂದು ಆಯೋಗ ಹೇಳಿದೆ. ಹೀಗಾಗಿ ಜನರು ಎಲ್ಲ 60 ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ಅನೇಕ ಕಡೆಗಳಲ್ಲಿ ಆಧಾರ್ ಕಾರ್ಡ್ ಆಧಾರದಲ್ಲಿ ಒಟಿಪಿ ಸಮರ್ಪಕವಾಗಿ ಬರುತ್ತಿಲ್ಲ. ಇದೆಲ್ಲವೂ ಸಮೀಕ್ಷೆಯ ಬಗ್ಗೆಯೇ ಸಂದೇಹ ಮೂಡುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.