ಮಂಗಳೂರು: ಬಲ್ಲಾಳ್ಬಾಗ್ ಫ್ರೆಂಡ್ಸ್ ಸಂಘಟನೆ ಸದಸ್ಯರ ಮೇಲೆ ಬೇರೆ ಧರ್ಮದ ಯುವಕರ ತಂಡ ದಾಳಿ ಮಾಡಿ, ಹಲ್ಲೆ ನಡೆಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಸಂಘಟನೆಯ ಉಪಾಧ್ಯಕ್ಷ ರಕ್ಷಿತ್ ಕೊಟ್ಟಾರಿ ಒತ್ತಾಯಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ಟೋಬರ್ 30ರ ರಾತ್ರಿ ಅಳಕೆಯ ಸುಮಾರು 15 ಮಂದಿ ಯುವಕರ ತಂಡ ವಿನಾಕಾರಣ ನಮ್ಮ ಸಂಘಟನೆಯ ಸದಸ್ಯರ ಮೇಲೆ ಹಲ್ಲೆ ನಡೆಸಿದೆ. ಪೊಲೀಸರು ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಈ ಘಟನೆಯ ಹಿಂದೆ ಯಾರಿದ್ದಾರೆ, ಯಾಕೆ ಹಲ್ಲೆ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಘಟನೆ ಕುರಿತಂತೆ, ಮುಖ್ಯಮಂತ್ರಿ, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
ಘಟನೆ ನಡೆದು ವಾರ ಕಳೆದರೂ ತನಿಖೆ ಸರಿಯಾಗಿ ಆಗಿಲ್ಲ. ಪೊಲೀಸ್ ಇಲಾಖೆ ಮುತುವರ್ಜಿವಹಿಸಿ, ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಸಂಘಟನೆಯ ಪ್ರಮುಖ ಧನಂಜಯ ಕೊಟ್ಟಾರಿ ಒತ್ತಾಯಿಸಿದರು.
15 ವರ್ಷಗಳಿಂದ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಬಲ್ಲಾಳ್ಬಾಗ್ ಫ್ರೆಂಡ್ಸ್ನ ಕಾರ್ಯಗಳಿಗೆ ಅಡ್ಡಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಪರಿಸದಲ್ಲಿ ಅಶಾಂತಿ ತಲೆದೋರಿದೆ ಎಂದರು.
ಸಂಘಟನೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪದಾಧಿಕಾರಿಗಳಾದ ಯಾದವ ಪೂಜಾರಿ, ಮೋಹಿತ್ ಶೆಟ್ಟಿ, ರೋಹಿತ್ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.