ಮುಡಿಪು: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ಸಮೀಪದ ಬೆಳ್ಳೇರಿ ಬಳಿ ಅವಿವಾಹಿತ ಮಹಿಳೆಯೊಬ್ಬರ ಕೊಲೆ ಪ್ರಕರಣವು ತಿರುವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಕಲೇಶಪುರದ 30ರ ಹರೆಯದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು ಇಬ್ಬರು ಪುತ್ರಿಯರಿದ್ದಾರೆ.
ಬಾಳೆಪುಣಿ ಗ್ರಾಮದ ಅವಿವಾಹಿತೆ ಮಹಿಳೆ ಕುಸುಮ(53) ತಮ್ಮ ಬೆಳ್ಳೇರಿಯ ಮನೆಯಲ್ಲಿ ಒಂಟಿಯಾಗಿ ವಾಸಿಸುತಿದ್ದರು. ಸೆ.26 ರಂದು ಮಹಿಳೆಯ ಸಹೋದರ ಕರೆ ಮಾಡಿದಾಗ ಫೋನ್ ರಿಸೀವ್ ಮಾಡದಿರುವುದರಿಂದ ಕೆಲಸಗಾರ್ತಿ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಬಳಿಕ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಕಳ್ಳತನಕ್ಕೆ ಬಂದವ ಅತ್ಯಾಚಾರ ನಡೆಸಿ ಕೊಂದ
ಕಳ್ಳತನಕ್ಕೆ ಮನೆಯೊಳಗೆ ನುಗ್ಗಿದ್ದ ಆರೋಪಿ ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿ ನಗ ನಗದು ಕಳ್ಳತನ ನಡೆಸಿದ್ದಾನೆ. ಬಳಿಕ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ. ಗಂಭೀರ ಹಲ್ಲೆಯಿಂದ ಮಹಿಳೆ ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಸಕಲೇಶಪುರದವನಾಗಿದ್ದು, ಆತನ ಪತ್ನಿಯ ಮನೆ ಮುಡಿಪು ಸಮೀಪ ಪಾತೂರು ಆಗಿತ್ತು. ಅಲ್ಲಿ ಕೂಡ ಸ್ವಲ್ಪ ಸಮಯ ವಾಸವಾಗಿದ್ದ. ಅಲ್ಲದೆ ಹೂಹಾಕುವ ಕಲ್ಲು ಬಳಿ ನವಗ್ರಾಮ ಸೈಟ್ ನಲ್ಲಿ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಕುಸುಮ ಅವರ ಮನೆ ಸಮೀಪದ ತೋಟದ ಕೆಲಸಕ್ಕೂ ಆತ ಬಂದಿದ್ದ. ಈ ಸಂದರ್ಭ ಕುಸುಮಾ ಅವರ ಮನೆ ಬಳಿ ಹಾವೊಂದು ಬಂದಿದ್ದಾಗ ಅದನ್ನು ಓಡಿಸಲು ಈತ ಬಂದಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಹಿಳೆಯ ಬಗ್ಗೆ ಈತ ಮಾಹಿತಿ ತಿಳಿದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.