
ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಂಗಳೂರಿನಿಂದ ಗೋವಾ ತನಕ ಮತ್ತು ದಾವಣಗೆರೆಯಿಂದ ಚಾಮರಾಜನಗರ ತನಕ 'ಯಂತ್ರಶ್ರೀ' ನೇಜಿ ನಾಟಿ ಕ್ಷೇತ್ರ ಪಾಠ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸುತ್ತಿದೆ. ರೈತರು ಕೇವಲ ರಬ್ಬರ್ ಮತ್ತು ಅಡಿಕೆ ಬೆಳೆದರೆ ಊಟ ಮಾಡಲು ಅನ್ನ ಸಿಗುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಯೋಜನೆಯು ಕಳೆದ 2010ರಲ್ಲಿ ನೇಜಿ ನಾಟಿಗೆ ಶ್ರೀ ಪದ್ಧತಿ ವ್ಯವಸ್ಥೆ ಅನುಷ್ಠಾನಗೊಳಿಸಿದೆ ಎಂದು ಕೃಷಿ ವಿಭಾಗ ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಹೇಳಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾಮದಪದವು ಸದಾಶಿವ ಪೂಜಾರಿ ಅವರ ಮನೆಯಲ್ಲಿ ಗುರುವಾರ ಏರ್ಪಡಿಸಿದ್ದ 'ಯಂತ್ರಶ್ರೀ' ನೇಜಿ ನಾಟಿ ಕ್ಷೇತ್ರ ಪಾಠ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲಾ ರೈತರು ಕನಿಷ್ಟ ತನ್ನ ಮನೆಗೆ ಬೇಕಾಗುವಷ್ಟಾದರೂ ಭತ್ತ ಬೆಳೆಯಬೇಕು. ಇದಕ್ಕಾಗಿ 'ಕೃಷಿ ಯಂತ್ರಧಾರೆ' ಯೋಜನೆಯಡಿ ಆಧುನಿಕ ಯಂತ್ರೋಪಕರಣ ಬಳಕೆ ಮಾಡಲು ಅವಕಾಶ ಇದೆ. ಕಳೆದ ವರ್ಷ ರಾಜ್ಯದಲ್ಲಿ 21 ಸಾವಿರ ಎಕರೆ ಜಮೀನಿನಲ್ಲಿ ನೇಜಿ ನಾಟಿ ಮಾಡಲಾಗಿದ್ದು, ತಾಲ್ಲೂಕಿನಲ್ಲಿ 500 ಎಕರೆ ನಾಟಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ 'ಯಂತ್ರಶ್ರೀ' ಕೃಷಿ ಯೋಜನೆಗೆ ಪೂರಕವಾಗಿ ಮಣ್ಣು ತಯಾರಿ, ಬೀಜ ತಯಾರಿ, ಸಸಿ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
ಯೋಜನಾಧಿಕಾರಿ ಪಿ.ಜಯನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಭಾಗದ ಯೋಜನಾಧಿಕಾರಿ ಬಾಲಕೃಷ್ಣ, ಯಂತ್ರಶ್ರೀ ಯೋಜನಾಧಿಕಾರಿ ಮಾರುತಿ, ಯೋಜನಾಧಿಕಾರಿ ಮೋಹನ್, ಜನಜಾಗೃತಿ ವೇದಿಕೆ ಸದಸ್ಯ ನವೀನ್ಚಂದ್ರ ಶೆಟ್ಟಿ, ಕೃಷಿಕ ಸದಾಶಿವ ಪೂಜಾರಿ, ಕೃಷಿ ಮೇಲ್ವಿಚಾರಕ ಭಾಸ್ಕರ್, ಮೇಲ್ವಿಚಾರಕಿ ಸವಿತಾ, ಮೆನೇಜರ್ ಶಿವಕುಮಾರ್, ಸೇವಾ ಪ್ರತಿನಿಧಿ ಪ್ರಕಾಶ್, ಚಂದಪ್ಪ, ಪ್ರಶಾಂತ್, ಶಂಕರ್, ಆನಂದ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.